ಮೂಡುಬಿದಿರೆ: ನಿವೇಶನ ರಹಿತ ಜನರಿಗೆ ಸರ್ವೇ ನಂ.308ರಲ್ಲಿ 10 ಎಕರೆ ಜಾಗವನ್ನು ಮನೆ ನಿವೇಶನಕ್ಕಾಗಿ ಕಾಯ್ದಿರಿಸುತ್ತೇವೆ. 6 ತಿಂಗಳಲ್ಲಿ ನಿವೇಶನ ರಹಿತ ಬಡ ಜನರಿಗೆ ನಿವೇಶನ ಮಾಡಿ, ಅವರಿಗೆ ಜಾಗ ನೀಡುವಂತಹ ವ್ಯವಸ್ಥೆ ಆಗಬೇಕು. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು 10 ದಿನಗಳ ಒಳಗಾಗಿ ಹಳೆಯ ಅರ್ಜಿ, ಕಡತಗಳಿದ್ದಲ್ಲಿ ಅದನ್ನು ವಿಲೇವಾರಿ ಮಾಡಬೇಕೆಂದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಸೂಚನೆ ನೀಡಿದರು.
ದ.ಕ. ಜಿಲ್ಲಾಡಳಿತ ಮತ್ತು ಜಿ.ಪಂ. ನ ಜಂಟಿ ಆಶ್ರಯದಲ್ಲಿ ಪಾಲಡ್ಕ ಗ್ರಾಮದ ಪೂಪಾಡಿಕಲ್ಲು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಕಡಂದಲೆಯ ಬಿ.ಸಿ.ಎಂ.ಹಾಸ್ಟೆಲ್ಗೆ, ಗುತ್ತ ಪರಿಶಿಷ್ಟ ಕಾಲನಿಗೆ ಹಾಗೂ ಕಾಂಗೂರಿ ಕೊರಗರ ಕಾಲನಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಹಾಸ್ಟೆಲ್ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿದರು. ಹಾಸ್ಟೆಲ್ನ ದುರಸ್ತಿ ಕೆಲಸಗಳಿಗೆ 2ಲಕ್ಷ ಅನುದಾನಕ್ಕಾಗಿ ಪ್ರಸ್ತಾವನೆ ಕಳುಹಿಸಿಕೊಡಲು ಹಾಸ್ಟೆಲ್ನ ವಾರ್ಡನ್ ಅರುಣ್ ಕುಮಾರ್ ಅವರಿಗೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳಿಗೆ 2 ಲಕ್ಷ ಅನುದಾನ ಒದಗಿಸಲಾಗುತ್ತದೆ. ಬೆಳುವಾಯಿಯಲ್ಲಿ ಗೋಶಾಲೆಗೆ ನಿವೇಶನ ಕಾಯ್ದಿರಿಸಲಾಗಿದ್ದು ಈ ಮೂಲಕ ಗೋಮಾಳವನ್ನು ಉಳಿಸುವ ಪ್ರಯತ್ನ ಮಾಡಲಾಗುವುದು. ಹಾಗೂ ಕಡಂದಲೆಯಲ್ಲಿ ಹಾಲು ಉತ್ಪಾದಕರ ಸಂಘದ, ಮನವಿಯಂತೆ ಮೇವುಗಾರಿಕೆಗಾಗಿ 2 ಎಕರೆ ಜಾಗ ಕಾಯ್ದಿರಿಸಲಾಗುವುದು ಎಂದರು.
ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ಜನರು ಸಮಸ್ಯೆಗಳಿಗೆ ಸಿಲುಕಿ ಕಛೇರಿಗಳಿಗೆ ಅಲೆದಾಡುವಂತಾಗಬಾರದೆಂಬ ಉದ್ದೇಶದಿಂದ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ” ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜನರು ಮುಕ್ತವಾಗಿ ಜಿಲ್ಲಾಧಿಕಾರಿಗಳಲ್ಲಿ ತಮ್ಮ ಅಹವಾಲು ಪತ್ರವನ್ನು ಸಲ್ಲಿಸಬಹುದು ಹಾಗೂ ಮೂಡುಬಿದಿರೆ ತಾಲೂಕಿನಲ್ಲಿ ಮಳೆ ಹಾನಿಯಿಂದಾದ ನಷ್ಟಕ್ಕೆ ಜಿಲ್ಲಾಡಳಿತದಿಂದ ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸ.ಕಮೀಷನರ್ ಮದನ್ಮೋಹನ್, ಡಿಡಿಎಲ್ಆರ್ ನಿರಂಜನ್, ಪಾಲಡ್ಕ ಗ್ರಾ.ಪಂ ಅಧ್ಯಕ್ಷ ದಿನೇಶ್.ಕೆ.ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ತಹಶೀಲ್ದಾರ್ ಪುಟ್ಟರಾಜು ಉಪಸಿತ್ಥರಿದ್ದರು.