ಉಡುಪಿ: ಸಮಾಜದಲ್ಲಿನ ಅಹಿತಕರ ವಾತಾವರಣ ದೂರ ಮಾಡಿ, ಶಾಂತಿ, ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ನೇತೃತ್ವದಲ್ಲಿ ವಿವಿಧ ಧರ್ಮದ ಮುಖಂಡರು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಬುಧವಾರ ಮಠದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆ ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಈ ಮೌಲ್ಯಗಳಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಅನೋನ್ಯತೆಯಿಂದ ಇದ್ದ ವ್ಯಾಪಾರಿಗಳ ನಡುವೆ ಗೊಂದಲ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ. ಸರ್ವ ಸಮುದಾಯದವರು ಇದಕ್ಕೆ ಶಾಂತಿಯುತ ಪರಿಹಾರ ಬಯಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ತಮ್ಮ ನೇತೃತ್ವದಲ್ಲಿ ಶಾಂತಿ ಸಮಿತಿಯನ್ನು ರಚಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಮಾಜಕ್ಕೆ ಸೌಹಾರ್ದ ಸಂದೇಶ ನೀಡಬೇಕು. ಅದಕ್ಕೆ ಎಲ್ಲ ಧರ್ಮಿಯರು ಸ್ಪಂದಿಸುವಂತಾಗಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಲಾಯಿತು.
ಈ ಬಗ್ಗೆ ಮಾತನಾಡಿದ ಪೇಜಾವರ ಶ್ರೀಗಳು, ಸಮಾಜದಲ್ಲಿ ಶಾಂತಿ ಸೌಹಾರ್ದ ನೆಮ್ಮದಿ ಬೇಕೆ ಬೇಕು. ಅದು ಕೇವಲ ಒಬ್ಬರ ಪ್ರಯತ್ನದಿಂದ ಸಾಧ್ಯವಾಗುವುದಿಲ್ಲ. ಅದಕ್ಕೆ ಎಲ್ಲರ ಪ್ರಯತ್ನ ಹಾಗೂ ಸಹಕಾರ ಅತೀ ಅಗತ್ಯ ಎಂದರು.
ಈ ಸಂದರ್ಭ ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್, ಸಾಮಾಜಿಕ ಕಾರ್ಯಕರ್ತ ಹಾಜಿ ಅಬ್ದುಲ್ಲಾ ನಾವುಂದ, ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಹಾಜಿ ಅಬೂಬಕ್ಕರ್, ಗಂಗಾಧರ್ ರಾವ್, ಮುಹಮ್ಮದ್ ಮೌಲಾ, ಅಬೂಬಕ್ಕರ್ ನೇಜಾರು, ಬೀದಿಬದಿ ವ್ಯಾಪಾರ ಮತ್ತು ಜಾತ್ರೆ ವ್ಯಾಪರಸ್ಥರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್, ನಿಸಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಧರ್ಮದ ಮುಖಂಡರಿಂದ ಪೇಜಾವರ ಶ್ರೀಗಳ ಭೇಟಿ
Subscribe
Login
0 Comments