ಮಂಗಳೂರು: ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಇಬ್ಬರು ವ್ಯಕ್ತಿಯಲ್ಲಿ ಒಬ್ಬ ವ್ಯಕ್ತಿ ಅನಾರೋಗ್ಯದಿಂದ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಫೆ.18ರಂದು ನಡೆದಿದೆ.
ಮಂಗಳೂರು ನಗರದ ಉರ್ವದ ರಾಜೇಶ್ (30) ಮೃತ ವ್ಯಕ್ತಿ. ಮತ್ತೊಂಬ್ಬ ವ್ಯಕ್ತಿ ಸುರತ್ಕಲ್ನ ಸತೀಶ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಮುಂಜಾನೆ ನಗರದ ಜ್ಯೋತಿ ಜಂಕ್ಷನ್ ಬಳಿ ಸ್ಮಾರ್ಟ್ಸಿಟಿ ಕಾಮಗಾರಿಯ ಕಬ್ಬಿಣದ ಸರಳು ಕದ್ದೊಯುತ್ತಿದ್ದರು. ಕೂಡಲೇ ಅವರನ್ನು ಗಸ್ತು ನಿರತ ಪೊಲೀಸರು ಹಿಡಿದು, ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಆರೋಪಿ ರಾಜೇಶ್ ಅವರಿಗೆ ಮಧ್ಯಾಹ್ನ 3.20ರ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ರಾಜೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವೈದ್ಯರು, ರಾಜೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ಮಾಡಲಾಗುತ್ತೆ. ಠಾಣೆಯ ಸಿ.ಸಿ ಕ್ಯಾಮರಾದಲ್ಲಿ ಎಲ್ಲಾ ದಾಖಲೆಗಳು ಲಭ್ಯವಿರುತ್ತದೆ. ಉತ್ತರ ವಿಭಾಗದ ಎ.ಸಿ.ಪಿ ಮಹೇಶ್ ಕುಮಾರ್ ನೇತ್ರತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಪೋಸ್ಟ್ ಮಾರ್ಟಂ ವರದಿಯನ್ನು ತಜ್ಞ ವೈದ್ಯರು ಚರ್ಚಿಸಿ ವರದಿ ನೀಡುತ್ತಾರೆ. ನಮ್ಮ ತನಿಖೆಯ ಬಳಿಕ ಸಿ.ಐ.ಡಿಯಿಂದ ಪ್ರಕರಣದ ಕುರಿತು ತನಿಖೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.