ಮುಲ್ಕಿ: ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಂಬಳ ಕೂಟ ಫೆ.5ರಿಂದ ಪುನರಾರಂಭಗೊಳ್ಳಲಿದೆ. ದೇವರ ಕಂಬಂಳವೆಂದು ಪ್ರಸಿದ್ಧಿ ಪಡೆದ ಐಕಳ ಬಾವ ಕಾಂತಬಾರೆ-ಬೂದಾಬಾರೆ ಕಂಬಳ ಫೆ.26ರಂದು ನಡೆಯಲಿದೆ.
ಈ ಕುರಿತು ಕಂಬಳ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿರುವ ಸಮಿತಿ ಅಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಜ.30ರಂದು ನಡೆಯಬೇಕಿದ್ದ ಐಕಳ ಬಾವ ಕಾಂತಬಾರೆ-ಬೂದಾಬಾರೆ ಕಂಬಳ ಕೋವಿಡ್ ಕಾರಣಕ್ಕೆ ಮುಂದೂಡಲಾಗಿ ಇದೀಗ ಫೆ.26ರಂದು ನಡೆಯಲಿದೆ ಎಂದರು.
ಇನ್ನು ಕಂಬಳ ದಿನ ಸಂಜೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂದರ್ಭ ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಈ ವೇಳೆ ಮೂರು ತಿಂಗಳ ಹಿಂದೆ ನಿಧನರಾದ ಕಂಬಳದಲ್ಲಿ ಡೋಲು ವಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಮುದರ ಗೋಪಾಲ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಮಿತಿ ಸಭೆಯಲ್ಲಿ ಐಕಳಬಾವ ಕಾಂತಬಾರೆ-ಬೂದಾಬಾರೆ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಕೋಶಾಧಿಕಾರಿ ಪ್ರಕಾಶ ಹೆಗ್ಡೆ, ಇನ್ನಿತರರು ಉಪಸ್ಥಿತರಿದ್ದರು.