ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವವು ಎ.1ರಿಂದ ಎ.15ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಮಾಹಿತಿ ನೀಡಿದರು.
ಉಚ್ಚಿಲದ ಮೊಗವೀರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು ಶಿಲೆದಾರು ಶಿಲ್ಪಗಳಿಂದ ಕೂಡಿದ ದೇವಾಲಯದಲ್ಲಿ ಶ್ರೀಪ್ರಸನ್ನ ಗಣಪತಿ, ಶ್ರೀಭದ್ರಕಾಳಿ, ಶ್ರೀನಾಗ ದೇವರ ಪುನರ್ ಪ್ರತಿಷ್ಠಾಪನೆ ನಡೆಯಲಿದೆ ಎಂದರು.
ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀಮಹಾಲಕ್ಷ್ಮೀ ದೇವಸ್ಥಾನವು ಶಿಲಾಮಯ ಗರ್ಭಗುಡಿ, ಶಿಲಾಮಯ ಶ್ರೀಭದ್ರಕಾಳಿ ಗುಡಿ, ಶಿಲಾಮಯ ಶ್ರೀಪ್ರಸನ್ನ ಗಣಪತಿ ಗುಡಿ, ಶ್ರೀ ನಾಗದೇವರ ಗುಡಿ, ಸುತ್ತುಪೌಳಿ, ಗುರುಪೀಠ, ರಾಜಗೋಪುರ, ಯಾಗಶಾಲೆ, ವಸಂತ ಮಂಟಪ, ರಥಬೀಧಿ, ಸುತ್ತು ಆವರಣ ಗೋಡೆ, ಬಯಲು ರಂಗ ಮಂಟಪ, ಒಳಚರಂಡಿ ವ್ಯವಸ್ಥೆ, ನೆಲಹಾಸು ಅಳವಡಿಕೆ ಹಾಗೂ ಪುಷ್ಕರಣಿಗಳನ್ನೊಳಗೊಂಡ 35 ಕೋಟಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರ ಮಾಡಲಾಗಿದೆ ಎಂದರು.
ಧಾರ್ಮಿಕ ಕಾರ್ಯಕ್ರಮಗಳು
ನೂತನವಾಗಿ ನಿರ್ಮಾಣಗೊಂಡ ರಾಜಗೋಪುರ ಹಾಗೂ ಲಕ್ಷ್ಮೀತೀರ್ಥ ಕೆರೆಯು ಎ.1ರ ಸಂಜೆ 5ಕ್ಕೆ ಉದ್ಘಾಟನೆಗೊಳ್ಳಲಿದೆ. ಎ.2ರಿಂದ 15ರ ವರೆಗೆ ಪ್ರತಿದಿನ ಸಂಜೆ 4ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.
ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾ ಅನ್ನಸಂತರ್ಪಣೆ ಎ.6ರಂದು, ವರ್ಷಂಪ್ರತಿ ನಡೆಯುವ ಶ್ರೀ ಮಹಾಲಕ್ಷ್ಮೀ ರಥೋತ್ಸವ ಹಾಗೂ ಮಹಾಅನ್ನಸಂತರ್ಪಣೆಯು ಎ.13ರಂದು ನಡೆಯಲಿದೆ. ಎ.15ರ ರಾತ್ರಿ 8ಕ್ಕೆ ಹಾಲಿಟ್ಟು ಸೇವೆ, ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲೋತ್ಸವ, ಎ.16ರ ಬೆಳಗ್ಗೆ ಸಂಪೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಸಿಎಂ ಸಹಿತ ಗಣ್ಯರು ಭಾಗಿ
15ದಿನಗಳ ನಿರಂತರ ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಸಂಸದರು, ಹಾಲಿ ಹಾಗೂ ಮಾಜಿ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರುಗಳು ಪಾಲ್ಗೊಳ್ಳಲಿದ್ದು, ವಿವಿಧ ಮಠಾಧೀಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರ್ಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕ್ರತಿಕ ಉತ್ಸವ ಏರ್ಪಡಿಸಲಾಗಿದೆ.
ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತಿ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು, ಗಾಯಕ ವಿಜಯ ಪ್ರಕಾಶ್ ಅವರಿಂದ ಸಾಂಸ್ಕ್ರತಿಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ದಿನ ಪೂರ್ವಾಹ್ನ 11.30ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಹೊರೆಕಾಣಿಕೆ ಮೆರವಣಿಗೆ
ಮಾ.27 ರಂದು ಕರಾವಳಿ ಭಾಗದ ಭಕ್ತಾಧಿಗಳ ಹೊರೆಕಾಣಿಕೆಯು 2000ಕ್ಕೂ ಹೆಚ್ಚು ವಾಹನಗಳ ಮೂಲಕ ಮೂಳೂರು ಹಾಗೂ ತೆಂಕ ಎರ್ಮಾಳ್ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೋ, ಚೆಂಡೆ, ಭಜನಾ ಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ 2 ರಿಂದ 3ಲಕ್ಷ ಭಕ್ತಾಧಿಗಳು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದ್ದು, ಸುಮಾರು 1ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಲಾಗಿದೆ. ವಾಹನ ನಿಲುಗಡೆಗೆ ಅಗತ್ಯವಿರುವಷ್ಟು ಪಾರ್ಕಿಂಗ್ ಜಾಗದ ಸಿದ್ದತೆ ಮಾಡಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.ಅಮೀನ್, ಕೋಶಾಧಿಕಾರಿ ವಿನಯ್ ಕರ್ಕೇರ, ಕಾರ್ಯದರ್ಶಿ ಶಂಕರ್ ಸಾಲ್ಯಾನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕೋಶಾಧಿಕಾರಿ ಭರತ್ ಎರ್ಮಾಳ್, ಜೊತೆ ಕಾರ್ಯದರ್ಶಿ ಮೋಹನ್ ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಗಂಗಾಧರ ಸುವರ್ಣ ಎರ್ಮಾಳ್, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು