ಉಡುಪಿ: ಉಡುಪಿ ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ ಶೆಟ್ಟಿ ಮೇ ತಿಂಗಳಲ್ಲಿ ಫ್ರಾನ್ಸ್ನಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಆಕೆಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಅಜ್ಜರಕಾಡು ಸರಕಾರಿ ಪ್ರೌಢಶಾಲೆ ಪ್ರಾಂಶುಪಾಲ ಬಿ.ಎಚ್. ಲಿಂಗರಾಜು ತಿಳಿಸಿದರು.
ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧುರ್ಯ ಶೆಟ್ಟಿ ಮೂಲತಃ ಕುಂದಾಪುರ ತಾಲೂಕಿನ ಹಿಲಿಯಾನ ಗ್ರಾಮದವರಾಗಿದ್ದು, ಪೂರ್ಣಿಮ ಶೆಟ್ಟಿ ಹಾಗೂ ಕೃಷ್ಣಮೂರ್ತಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾರೆ. ತಂದೆ ಗಾರೆ ಕೆಲಸ ವೃತ್ತಿ ಮಾಡುತ್ತಿದ್ದು, ಇವರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಮೂರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ದಂಪತಿಯ ಕೂಲಿ ಕೆಲಸವೇ ಆಧಾರ ಎಂದರು.
ಮಾಧುರ್ಯ ಶೆಟ್ಟಿ ಇತ್ತೀಚೆಗೆ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯ ಓಡಿಸ್ಸಾದ ಭುವನೇಶ್ವರದಲ್ಲಿ ನಡೆದ ಸೆಲೆಕ್ಷನ್ ಟ್ರಯಲ್ಸ್ನಲ್ಲಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮೇ.14 ರಿಂದ ಮೇ. 22ರ ವರೆಗೆ ಫ್ರಾನ್ಸ್ ನೋರ್ಮ್ಯಾಂಡಿಯಲ್ಲಿ ಜರಗುವ 19ನೇ ಅಂತರರಾಷ್ಟ್ರೀಯ ಸ್ಕೂಲ್ ಫೆಡರೇಶನ್ ಜಿಮ್ನಾಷಿಯಡ್ನಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಮತ್ತು ಪ್ರಯಾಣ ವೆಚ್ಚಕ್ಕೆ ಮಾಧುರ್ಯ ಅವರಿಗೆ 2.50 ಲಕ್ಷ ರೂ., ಆರ್ಥಿಕ ನೆರವಿನ ಅಗತ್ಯವಿದೆ. ಬಡ ಕುಟುಂಬದ ವಿದ್ಯಾರ್ಥಿನಿಗೆ ಕ್ರೀಡಾಭಿಮಾನಿಗಳು ನೆರವು ನೀಡುವ ಮೂಲಕ ಸಾಧನೆಗೆ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು.
ನೆರವು ನೀಡಲು ಇಚ್ಛಿಸುವವರು ಕೆನೆರಾ ಬ್ಯಾಂಕ್ ಶಾಖೆ ಬೆಳ್ವೆ, ಖಾತೆ ಸಂಖ್ಯೆ 0647108 056741, ಐಎಫ್ಎಸ್ಸಿ ಸಂಖ್ಯೆ: ಸಿಎನ್ಆರ್ಬಿ 0000 647 ನೆರವು ನೀಡಬಹುದು.
ಸುದ್ದಿಗೋಷ್ಠಿಯಲ್ಲಿ ಹಿಲಿಯಾನ ಸರಕಾರಿ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಸುಗಂಧಿ, ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಿಂಥಿಯಾ ಕ್ರಾಸ್ತ, ಪೂರ್ಣಿಮ ಶೆಟ್ಟಿ ಉಪಸ್ಥಿತರಿದ್ದರು.