ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮತ್ತು ಹರ್ಯಾಣದಲ್ಲಿರುವ ಕ್ರಿಮಿನಲ್ ಗ್ಯಾಂಗ್ ಸದಸ್ಯರ ಅಡಗುತಾಣಗಳ ಮೇಲೆ ದ್ವಾರಕಾ ಪೊಲೀಸರು ಬುಧವಾರ ದಾಳಿ ನಡೆಸಿದ್ದು, ಸುಮಾರು 20 ಲಕ್ಷ ರೂಪಾಯಿ ನಗದು, ಶಸ್ತ್ರಾಸ್ತ್ರ ಹಾಗೂ ಇನ್ನಿತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಮಂಗಳವಾರ ತಿಹಾರ್ ಜೈಲಿನಲ್ಲಿ ಗ್ಯಾಂಗ್ ಸ್ಟರ್ ಟಿಲ್ಲು ತಾಜ್ ಪುರಿಯಾನನ್ನು ಹತ್ಯೆಗೈದಿದ್ದ ಘಟನೆ ನಂತರ ಈ ಬೆಳವಣಿಗೆ ನಡೆದಿರುವುದಾಗಿ ವರದಿ ವಿವರಿಸಿದೆ.ದೆಹಲಿಯಲ್ಲಿ 20 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದು, ಜಾಜ್ಜಾರ್ ಮತ್ತು ಹರ್ಯಾಣದಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿರುವುದಾಗಿ ಡಿಸಿಪಿ ಹರ್ಷವರ್ಧನ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ದಾಳಿಯ ಸಂದರ್ಭದಲ್ಲಿ ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ದೆಹಲಿ ಪೊಲೀಸರು ಇತರ ರಾಜ್ಯಗಳ ಮಾಹಿತಿಗಳನ್ನು ಕಲೆ ಹಾಕುತ್ತಿರುವುದಾಗಿ ವರದಿ ಹೇಳಿದೆ.