ಉಡುಪಿ:ಶಬರಿಮಲೆ ಯಾತ್ರೆ ವೇಳೆ ಅಯ್ಯಪ್ಪ ಮಾಲಾಧಾರಿಯೋರ್ವರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಜನವರಿ ೧೬ರಂದು ವರದಿಯಾಗಿದೆ. ಮೃತರನ್ನು ಉಡುಪಿ ಜಿಲ್ಲೆಯ ಉದ್ಯಾವರದ ಅಯ್ಯಪ್ಪ ಮಂದಿರದಿಂದ ಹೊರಟಿದ್ದ ಸುರೇಶ್ ಬಂಗೇರ ಎಂದು ಗುರುತಿಸಲಾಗಿದೆ.
ಸುರೇಶ ಬಂಗೇರ ಅವರು ಜನವರಿ ೧೪ರಂದು ಉದ್ಯಾವರದ ಅಯ್ಯಪ್ಪ ಮಂದಿರದಲ್ಲಿ ಪೂಜೆಯನ್ನು ಮುಗಿಸಿ ಶಬರಿಮಲೆ ಯಾತ್ರೆಯನ್ನು ಕೈಗೊಂಡಿದ್ದರು. ಸುಮಾರು ೩೦ ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಹೊಂದಿದ್ದ ಈ ತಂಡದಲ್ಲಿ ಸುರೇಶ್ ಕೂಡ ಒಬ್ಬರಾಗಿದ್ದರು. ಸುಮಾರು ೨೮ಬಾರಿ ಶಬರಿಮಲೆ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದ ಇವರು ಈ ಬಾರಿಯ ಯಾತ್ರೆಯ ವೇಳೆಗೆ ಹೃದಯಾಘಾತದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.
ಶಬರಿಮಲೆ ಗಣೇಶ ಬೆಟ್ಟ ಹತ್ತುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾದ ಸುರೇಶ್ ಅವರನ್ನು ಕೂಡಲೇ ಪಂಪೆಯ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿಂದ ಪಲ್ಲತ್ತಿಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಸುರೇಶ್ ಅವರು ಉದ್ಯಾವರದ ಸಂಪಿಗೆ ನಗರದ ನಿವಾಸಿಯಾಗಿದ್ದು, ರಿಕ್ಷಾ ಚಾಲಕರಾಗಿ ಕೆಲಸವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.