ಉಡುಪಿ: ಬಿಜೆಪಿ ಮುಸ್ಲಿಂ ವಿರೋಧಿ ಸರ್ಕಾರ. ಅವರಿಗೆ ಹೆಣ್ಣುಮಕ್ಕಳು ಶಿಕ್ಷಣ ಕಲಿಯುವುದು ಇಷ್ಟ ಇಲ್ಲ. ಬಿಜೆಪಿ ಸರ್ಕಾರ ಕೋರ್ಟ್ ಆದೇಶ ತಿರುಚುತ್ತಿದೆ. ಎಂದು ಎಸ್ಡಿಪಿಐ ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಗುರುವಾರ ಹಿಜಾಬ್ ಕೇಸರಿ ಶಾಲು ವಿವಾದದ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ವಿನಂತಿ ಮಾಡುತ್ತೇನೆ. ಮಧ್ಯಂತರ ಆದೇಶದಲ್ಲಿ ಆಡಳಿತ ಮಂಡಳಿ ಸಮವಸ್ತ್ರ ಕಡ್ಡಾಯ ಮಾಡಿದರೆ ಮಾತ್ರ ಪಾಲಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಲವೆಡೆ ಈ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಸಲ್ಮಾನ ವಿದ್ಯಾರ್ಥಿಗಳನ್ನು ಗೇಟಲ್ಲೇ ತಡೆಯಲಾಗಿದೆ. ಚೀಫ್ ಜಸ್ಟಿಸ್ ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸಮವಸ್ತ್ರದ ಸ್ಪಷ್ಟ ತಿಳುವಳಿಕೆ ಕೊಡಬೇಕೆಂದು ಅಬ್ದುಲ್ ಮಜೀದ್ ತಿಳಿಸಿದರು.