ಉಡುಪಿ: ನಮ್ಮದು ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರ. ಕಾನೂನು ಸುವ್ಯವಸ್ಥೆ, ಸಮಾನತೆಯಿಂದ ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡಿದರೆ ತೊಂದರೆ ಇಲ್ಲ. ಆದರೆ ಕಾನೂನನ್ನು ಕೈಗೆತ್ತಿಕೊಂಡರೆ ಅಥವಾ ಹಿಂಸೆಗಿಳಿದರೆ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಟಾಸ್ಕ್ಫೋರ್ಸ್ ರಚಿಸಲಾಗುತ್ತಿರುವ ಬಗ್ಗೆ ಮಾತನಾಡಿದರು. ಎಲ್ಲದ್ದಕ್ಕೂ ಕಾನೂನಿದೆ. ಮತ್ತು ಕೆಲವು ಕಾನೂನುಗಳನ್ನು ಹಿಂದಿನ ಸರ್ಕಾರಗಳೇ ಮಾಡಿವೆ. ಅವುಗಳನ್ನು ಬಿಟ್ಟು ನಾವು ಹೊಸ ಕಾನೂನು ಮಾಡುತ್ತಿಲ್ಲ. ಕಾನೂನಿನ ಪ್ರಕಾರ ನಡೆಯುವುದು, ಕಾನೂನನ್ನು ರಕ್ಷಿಸುವುದು ನಮ್ಮ ಕೆಲಸ ಎಂದರು.
ನಮ್ಮದು ಶಾಂತಿ ಸುವ್ಯವಸ್ಥೆ ಇರುವ ಪ್ರಗತಿಪರ ರಾಜ್ಯ:
ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಿಎಂ ಮೌನವಾಗಿದ್ದೀರಿ ಎಂಬ ವಿಪಕ್ಷಗಳ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ನಮ್ಮ ಕೆಲಸಗಳು ಮಾತನಾಡಬೇಕು. ನಾವು ಮಾತನಾಡಬಾರದು. ಯಾವ ಸಂದರ್ಭದಲ್ಲಿ ಏನು ನಿರ್ಧಾರ, ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿದಿದೆ. ಇವರಿಂದ ಏನು ಕಲಿಯಬೇಕಿಲ್ಲ. ನಮ್ಮದು ಶಾಂತಿ ಸುವ್ಯವಸ್ಥೆ ಇರುವ ಪ್ರಗತಿಪರ ರಾಜ್ಯ. ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕೆಂದು ಗೊತ್ತಿದೆ ಎಂದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಹತ್ತು ಹಲವಾರು ಹಿಂದೂ ಯುವಕರ ಕೊಲೆಗಳಾದವು. ಇವರು ಹಲವಾರು ಕೊಲೆಗಳಿಗೆ ನೇರವಾಗಿ ಆರೋಪ ಇರುವ ಸಂಸ್ಥೆಗಳ ಪ್ರಕರಣಗಳನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಕೈಬಿಟ್ಟರಲ್ಲ. ಆಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿತ್ತು? ಆ ಸಂಸ್ಥೆಗಳ ಮೇಲಿನ ಪ್ರಕರಣವನ್ನೇ ಹಿಂಪಡೆದರಲ್ಲಾ, ಆಗ ಅವರು ಬುದ್ದಿ ಕಳೆದುಕೊಂಡಿದ್ದರೇ ಎಂದು ಪ್ರಶ್ನಿಸಿದರು.