ಮಂಗಳೂರು: ಖಾಸಗಿ ಬಸ್ಸೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಡುರಸ್ತೆಯಲ್ಲೇ ಬಸ್ ಹಾಗೂ ಬೈಕ್ ಹೊತ್ತಿ ಉರಿದ ಘಟನೆ ಮಂಗಳೂರು ನಗರದ ಹಂಪನಕಟ್ಟೆ ವೃತ್ತದ ಬಳಿ ಗುರುವಾರ ನಡೆದಿದೆ.
ಸಿಗ್ನಲ್ ಜಂಪ್ ಮಾಡಿ ವೇಗವಾಗಿ ನುಗ್ಗಿದ್ದ ಬೈಕ್ ಸವಾರ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಸ್ಸಿನ ಎದುರಿನ ಚಕ್ರದಡಿಗೆ ಬಿದ್ದ ಬೈಕ್ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬಸ್ಸಿಗೆ ಬೆಂಕಿ ತಗುಲಿದೆ. ಘಟನೆಯಲ್ಲಿ ಬಸ್ಸಿನ ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಬಸ್ಸಿಗೆ ಬೆಂಕಿ ಬೀಳುತ್ತಲೇ ಬಸ್ ನಿರ್ವಾಹಕ ಪ್ರಯಾಣಿಕರ ಇಳಿಸಿದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದೆ.