ಬೆಂಗಳೂರು:ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಪಾದಯಾತ್ರೆ ವಿರುದ್ಧವಾಗಿ ಅನೇಕ ಧ್ವನಿಗಳು ಕೇಳಿಬರುತ್ತಿದ್ದರೂ ಕೂಡ ಕೈ ನಾಯಕರು ಹಿಡಿದ ಪಟ್ಟು ಬಿಡದೇ ಪಾದಯಾತ್ರೆ ಮುಂದುವರಿಸುತ್ತಿದ್ದಾರೆ. ಕೊರೊನಾ ಮೂರನೇ ಅಲೆ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಈ ರೀತಿಯಾಗಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರಸ್ ನಡೆಯನ್ನು ಹೈಕೋರ್ಟ್ ನಿನ್ನೆಯಷ್ಟೇ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಇದೀಗ ಕಾಂಗ್ರೆಸ್ ಸಮಾವೇಶವನ್ನು ರದ್ದುಗೊಳಿಸಿ ನೋಟಿಸನ್ನು ಜಾರಿಗೊಳಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ಜನವರಿ 18 ಮತ್ತು 19ರಂದು ನಡೆಯಬೇಕಿದ್ದ ಕಾಂಗ್ರೆಸ್ ಸಮಾವೇಶಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಿತ್ತು. ಆದರೆ ಇದೀಗ ಆಗುತ್ತಿರುವ ಜಟಾಪಟಿಯ ಹಿನ್ನೆಲೆ ಕೊಟ್ಟಿರುವ ಅನುಮತಿಯನ್ನು ಹಿಂತೆಗೆದುಕೊಂಡಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸನ್ನು ಜಾರಿಗೊಳಿಸಿರುವ ಬೆಂಗಳೂರು ಮಹಾನಗರ ಪಾಲಿಕೆ ಸಮಾವೇಶವನ್ನು ಕೈಗೊಳ್ಳದಂತೆ ಮಾಹಿತಿಯನ್ನು ನೀಡಿದೆ.
ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ. ಇದರ ವಿರುದ್ಧವಾಗಿ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಪ್ರಸಾದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯ ಬಳಿಕ ಹೈಕೋರ್ಟ್ ಕೊರೊನಾ ಅಟ್ಟಹಾಸದ ಈ ಸಂದರ್ಭ ಮೇಕೆದಾಟು ಪಾದಯಾತ್ರೆ ಕೈಂಗೊಂಡಿರುವುದಕ್ಕೆ ಕೆಪಿಸಿಸಿ ಹಾಗೂ ಪಾದಯಾತ್ರೆ ತಡೆಯದ ರಾಜ್ಯ ಸರ್ಕಾರದ ಮೇಲೂ ಕೂಡ ಗರಂ ಆಗಿದೆ. ಇದಕ್ಕೆ ಉತ್ತರವನ್ನು ನೀಡುವಂತೆ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರಕ್ಕೆ ಜನವರಿ 14ಕ್ಕೆ ಗಡುವು ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೆ ಕಾಂಗ್ರೆಸ್ ಸಮಾವೇಶಕ್ಕೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದುಗೊಳಿಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರು ಅಧಿಕಾರಿಗಳಿಂದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.