ಬೆಂಗಳೂರು: ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಅವರು ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ಸಂಕೀರ್ಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರು ಹೊರವಲಯದಲ್ಲಿ ವಿಶ್ವ ದರ್ಜೆ ಸೌಲಭ್ಯಗಳನ್ನು ಒಳಗೊಂಡ ಎನ್ಸಿಎ ಯ ಹೊಸ ಕೇಂದ್ರವು 50 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರದೇಶವನ್ನು ಕರ್ನಾಟಕ ಸರ್ಕಾರವು ಬಿಸಿಸಿಐಗೆ 99 ವರ್ಷಗಳ ಅವಧಿಗೆ ಗುತ್ತಿಗೆ ರೂಪದಲ್ಲಿ ನೀಡಲಾಗಿದೆ. ಹೊಸ ಎನ್ಸಿಎ ಕೇಂದ್ರದಲ್ಲಿ ಮೂರು ಕ್ರಿಕೆಟ್ ಮೈದಾನಗಳು ನಿರ್ಮಾಣವಾಗುತ್ತಿದ್ದು, ಇದರಲ್ಲಿ ದೇಶೀಯ ಪಂದ್ಯಗಳು ನಡೆಯಲಿವೆ.


ಎನ್ಸಿಎ ಕೇಂದ್ರದಲ್ಲಿ 16 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಧುನಿಕ ಪರಿಕರಗಳನ್ನು ಒಳಗೊಂಡ ಜಿಮ್ ಇರಲಿದೆ. 40 ಅಭ್ಯಾಸ ಪಿಚ್ ಗಳು ಇರಲಿದ್ದು, ಇದರಲ್ಲಿ 20 ಹೊನಲು ಬೆಳಕಿನ ವ್ಯವಸ್ಥೆ ಇರಲಿದೆ. ಇನ್ನು ಆಟಗಾರರ ವಾಸ್ತವ್ಯಕ್ಕೆ 243 ಕೊಠಡಿಗಳ ವ್ಯವಸ್ಥೆ, ಶಿಶುಧಾಮ, ಉಷ್ಣಾಂಶ ನಿಯಂತ್ರಿಸಬಲ್ಲ ಈಜುಕೊಳ ಹಾಗೂ ಒಳಾಂಗಣ ಅಭ್ಯಾಸ ಸೌಕರ್ಯ, ಆವರಣದಲ್ಲಿ ಬ್ಯಾಂಕ್, ಫಾರ್ಮಸಿ, ಆಸ್ಪತ್ರೆ, ಕೋರಿಯರ್, ಸಲೂನ್, ಎಟಿಎಂ, ಸೈಕ್ಲಿಂಗ್ ಟ್ರ್ಯಾಕ್, ಬಾಸ್ಕೆಟ್ಬಾಲ್, ಟೆನಿಸ್ ಕೋರ್ಟ್ ಗಳು ಇರಲಿವೆ.
ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ‘ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೆಲಸ ಇಂದು ಆರಂಭವಾಗಿದೆ . ಇದಕ್ಕೆ ಬೆಂಗಳೂರಿನಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಕಾರ್ಯದರ್ಶಿ ಜಯ್ ಷಾ ಅವರು ‘ನೂತನ ಎನ್ಸಿಎ ಶ್ರೇಷ್ಠತಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.