ಕುಂದಾಪುರ: ಕೊರೊನಾ ಮೊದಲ ಲಾಕ್ಡೌನ್ ವೇಳೆ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶ್ವನಾಥ ಭಟ್ ಅವರ ವಿರುದ್ಧ ದಾಖಲಾಗಿದ್ದ ಕರ್ಫ್ಯೂ ಉಲ್ಲಂಘನೆ ಪ್ರಕರಣವನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ.
ಹೈಕೋರ್ಟ್ ನ್ಯಾಯವಾದಿ ಪವನ್ಚಂದ್ರ ಶೆಟ್ಟಿ ಅವರು ಸಂತ್ರಸ್ತ ವಿದ್ಯಾರ್ಥಿ ವಿಶ್ವನಾಥ್ ಭಟ್ ಮೇಲಿನ ದೂರನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ, ಅರ್ಜಿದಾರರ ಪರವಾಗಿ ವಾದಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ಎಫ್ಐಆರ್, ಜಾರ್ಜ್ಶೀಟ್ ಹಾಗೂ ಕೆಳ ನ್ಯಾಯಾಲಯದ ತೀರ್ಪನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹಿನ್ನಲೆ:
ವಿದ್ಯಾರ್ಥಿ ವಿಶ್ವನಾಥ್ ವಿರುದ್ಧ ಪಿಎಸ್ಐ ಹರೀಶ್ ಸಹಾಯಕ ಕಮಿಷನರ್ ರಾಜು ಕೆ. ನಿರ್ದೇಶನದ ಅನುಸಾರ 2020ರ ಮಾ.26ರಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಿಶ್ವನಾಥ್ ಲಾಕ್ಡೌನ್ನಿಂದ ಊರಿಗೆ ಬಂದಿದ್ದು, ಔಷಧ ಖರೀದಿಸಲು ಮೆಡಿಕಲ್ಗೆ ಬಂದಿದ್ದ. ಈ ವೇಳೆ ಆತ ಮಾಸ್ಕ್ ಹಾಕದ ಕಾರಣ ಪೊಲೀಸರು ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಆತ ಪ್ರಶ್ನೆಗೆ ಉತ್ತರಿಸಿದರೂ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.