ಬೆಂಗಳೂರು: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ರಾಜ್ಯದ ಕೊರೋನಾ ಸ್ಥಿತಿ ಕುರಿತು ಸಭೆ ನಡೆಯಲಿದೆ.
ಇಂದಿನ ಸಭೆಯಲ್ಲಿ ಹೊಟೇಲ್, ಬಾರ್, ಪಬ್, ರೆಸ್ಟೋರೆಂಟ್, ಚಿತ್ರಮಂದಿರಗಳು, ಜಿಮ್, ಸ್ವಿಮ್ಮಿಂಗ್ ಪೂಲ್ ಗಳಿಗೆ ವಿಧಿಸಿದ್ದ ಶೇಕಡ 50 ರ ಮಿತಿ ನಿರ್ಬಂಧ ಸಡಿಲಿಕೆ, ಕರ್ಫ್ಯೂ ಮುಂದುವರಿಕೆ, ನೈಟ್ ಕರ್ಫ್ಯೂ ಮುಂದುವರೆಸುವಿಕೆ ಇಲ್ಲವೇ ಸಮಯ ಬದಲಾವಣೆ, ಬೆಂಗಳೂರಿನಲ್ಲಿ 1 ರಿಂದ 9 ರ ವರೆಗಿನ ಶಾಲೆ ಆರಂಭ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇಂದು ನಡೆಯುವ ಸಭೆಯಲ್ಲಿ ಆರೋಗ್ಯ ಸಚಿವರು, ಕಂದಾಯ ಸಚಿವರು, ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಇಲಾಖಾ ಕಾರ್ಯದರ್ಶಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವೀಡಿಯೋ ಕಾನ್ಫರೆನ್ಸ್ ಮುಖಾಂತರ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.