ಸುಳ್ಯ: ನಿರ್ಮಾಣ ಹಂತದಲ್ಲಿರುವ ಶಾಂತಿನಗರ ಕ್ರೀಡಾಂಗಣ ಇದೀಗ ಅಪಾಯವನ್ನು ತಂದೊಡ್ಡಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕ್ರೀಡಾಂಗಣ ಬಿರುಕು ಬಿಟ್ಟಿದ್ದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು ಮೂರು ವಾರಗಳಿಂದ ಈ ಕಾಮಗಾರಿಗೆ ಸಂಬಂಧಿಸಿದಂತೆ ನಾನಾ ರೀತಿಯ ಮನವಿಗಳು,ಜನಪ್ರತಿನಿಧಿಗಳ ಬೇಟಿ, ಸಂಬಂಧಪಟ್ಟ ಅಧಿಕಾರಿಗಳ ಭೇಟಿ, ಪ್ರತಿಪಕ್ಷ ನಾಯಕರುಗಳ ಭೇಟಿ ಮುಂತಾದ ಚಟುವಟಿಕೆಗಳ ಕೇಂದ್ರವಾಗಿ ಶಾಂತಿನಗರ ಕ್ರೀಡಾಂಗಣ ಮಾರ್ಪಟ್ಟಿದೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಿರ್ಮಿತಿ ಕೇಂದ್ರದ ಅಧಿಕಾರಿ ರಾಜೇಂದ್ರ ಕಲ್ಬಾವಿ ಸ್ಥಳ ಪರಿಶೀಲನೆ ನಡೆಸಿ, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳೀಯ ಜನರ ರಕ್ಷಣೆಗೆ ಆದ್ಯತೆ ನೀಡುವ ಹಿನ್ನೆಲೆ ಮಣ್ಣು ಕುಸಿಯದೇ ಇರುವ ಕೆಲಸ ಕಾರ್ಯಗಳನ್ನು ಮಾತ್ರ ಮಾಡುವಂತೆ ಸುಚಿಸಿದ್ದರು. ಅದರಂತೆ ಮಣ್ಣು ಹಾಕಿರುವ ಪ್ರದೇಶದ ಕೆಳಭಾಗದಲ್ಲಿ ಕೆಲಸಗಾರರು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣನ್ನು ತುಂಬಿ ಸ್ಟೆಪ್ ನಿರ್ಮಿಸಿ ಅಡ್ಡಲಾಗಿ ಜೋಡಿಸುವ ಕಾರ್ಯವನ್ನು ಮಾಡುತ್ತಿದ್ದರು.
ಆದರೆ ಇದನ್ನು ನೋಡಿದ ಕಾಂಗ್ರೆಸ್ ಮುಖಂಡರು ಗೋಣಿಯಲ್ಲಿ ಮಣ್ಣು ತುಂಬಿ ಇಟ್ಟರೆ ಅದು ಎಷ್ಟು ತಡೆಯಬಹುದು ಎಂಬ ಪ್ರಶ್ನೆ ಮಾಡಿರುವ ಹಿನ್ನೆಲೆ, ಇದೀಗ ಈ ಕಾರ್ಯವನ್ನು ಕೂಡ ಸ್ಥಗಿತಗೊಳಿಸಲಾಗುವುದೆಂದು ಹೇಳಲಾಗಿದೆ.
ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮಣ್ಣು ರಾಶಿಯಲ್ಲಿ ಸುಮಾರು ಐವತ್ತು ಅಡಿಗಳಷ್ಟು ಉದ್ದಕ್ಕೆ ಬಿರುಕು ಕಾಣಿಸುತ್ತಿದ್ದು ಇದರಿಂದ ಸ್ಥಳೀಯರು ಇನ್ನೂ ಹೆಚ್ಚು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.