ಬೆಂಗಳೂರು: ರಾಜ್ಯದ ಕೋವಿಡ್ ಸೋಂಕಿನ ಕುರಿತು ಇನ್ನು ಎರಡು ಮೂರು ದಿನಗಳಲ್ಲಿ ಸ್ಪಷ್ಟವಾದ ಚಿತ್ರಣ ಸಿಗಲಿದೆ. ಸಿಎಂ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲ ವರ್ಗದ ಜನರು, ತಜ್ಞರು, ತಾಂತ್ರಿಕ ಸಮಿತಿ ಸಲಹೆಗಾರರು ನೀಡಿದ ಸಲಹೆ ಅಭಿಪ್ರಾಯಗಳ ಮೇರೆಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸರ್ಕಾರವು ಕರ್ಫ್ಯೂ, ನಿರ್ಬಂಧಗಳ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲಿದೆ. ಸರ್ಕಾರದ ನಿರ್ಧಾರವು ಶುಕ್ರವಾರ ರಾತ್ರಿ ಹೊರಬೀಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸರ್ಕಾರದ ಮೊದಲ ಆದ್ಯತೆಯು ಆರೋಗ್ಯ ತುರ್ತು ಪರಿಸ್ಥಿತಿ ಸಮಯದಲ್ಲಿ ಜನರ ಜೀವವನ್ನು ಕಾಪಾಡುವುದು, ಅವರ ಜೀವನಕ್ಕೆ ತೊಂದರೆಗಳಾಗದಂತೆ ನೋಡಿಕೊಳ್ಳುವುದು, ಹಾಗೂ ಸರ್ಕಾರದ ನಿರ್ಧಾರಗಳಿಂದ ಜನರ ಜೀವನಕ್ಕೆ ತೊಂದರೆಗಳಾಗದಂತೆ ನೋಡಿಕೊಳ್ಳುವುದಾಗಿದೆ. ಈಗಾಗಲೇ ಕೊರೋನಾ ಲಸಿಕೆ ಪಡೆಯುವುದರಿಂದ ಆಗುವ ಲಾಭ, ಹಾಗೂ ಅದರ ಪರಿಣಾಮದ ಕುರಿತು ನಮಗೆ ಸ್ಪಷ್ಟ ಚಿತ್ರಣ ದೊರಕಿದೆ. ಆದ್ದರಿಂದ್ ಎಲ್ಲರೂ ಲಸಿಕೆ ಹಾಕಿಕೊಳ್ಳುವುದು ಅತ್ಯಗತ್ಯ. 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳೆಲ್ಲರೂ ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಡಾ.ಕೆ.ಸುಧಾಕರ್ ಹೇಳಿದರು.