ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಧೋನಿ ಬದಲಿಗೆ ರವೀಂದ್ರ ಜಡೇಜಾ ಸಿಎಸ್ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವಿಚಾರವನ್ನು ಸ್ವತಃ ಸಿಎಸ್ಕೆ ಆಡಳಿತ ಮಂಡಳಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ.
2012ರಿಂದ ಸಿಎಸ್ಕೆಯ ಅವಿಭಾಜ್ಯ ಅಂಗವಾಗಿರುವ ಜಡೇಜಾ, ಸಿಎಸ್ಕೆಯನ್ನು ಮುನ್ನಡೆಸುವ 3ನೇ ಆಟಗಾರನಾಗಲಿದ್ದಾರೆ. ಐಪಿಎಲ್ ಲೀಗ್ 2008ರಲ್ಲಿ ಆರಂಭವಾಗಿದ್ದು, ಅಂದಿನಿಂದಲೂ ಧೋನಿ ಸಿಎಸ್ಕೆ ತಂಡದ ನಾಯಕನಾಗಿದ್ದರು. ಅವರಿಗೆ ಇದು ಐಪಿಎಲ್ ಕೊನೆಯ ಆವೃತ್ತಿ ಆಗಬಹುದು.
ಧೋನಿ ನಾಯಕತ್ವದಲ್ಲಿ ಸಿಎಸ್ಕೆ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದು ಐಪಿಎಲ್ ನ ಯಶಸ್ವೀ ತಂಡವಾಗಿ ಹೆಸರುವಾಸಿಯಾಗಿತ್ತು. ಇದೀಗ ಧೋನಿ ರಾಜೀನಾಮೆಯು ಅಭಿಮಾನಿಗಳಿಗೆ ಶಾಕ್ ನೀಡಿದೆ.