ಮಂಗಳೂರು: ಸರ್ಕಾರದಿಂದ ವಿದ್ಯಾರ್ಥಿಗಳ ತೇಜೋವಧೆ ಆಗುತ್ತಿದ್ದು, ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸುತ್ತದೆ. ಕಾಲೇಜು ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಆಂತರಿಕ ವಿಚಾರವನ್ನ ಬಹಿರಂಗ ಪಡಿಸುತ್ತಿದ್ದು, ಈ ಕುರಿತು ಎಸ್ಪಿ ಕಚೇರಿಯಲ್ಲಿ ವಿದ್ಯಾರ್ಥಿಗಳು ದೂರು ನೀಡಿದ್ದಾರೆ ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಅವರು ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಂಚಲನ ಮೂಡಿಸಿದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು ವಿವಾದ ಸೃಷ್ಟಿಸಿದ್ದೇ ಸಿಎಫ್ಐ ಎಂದು ಬಿಜೆಪಿ ನಾಯಕರು ಸಿಎಫ್ಐ ಮೇಲೆ ಗೂಬೆ ಕುರಿಸುವ ಯತ್ನ ನಡೆಸುತ್ತಿದ್ದಾರೆ. ಇಂತಹ ನಿರಾಧಾರ ಆರೋಪಗಳನ್ನು ಕ್ಯಾಂಪಸ್ ಫ್ರಂಟ್ ತಳ್ಳಿ ಹಾಕುತ್ತದೆ. ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯಿಂದ ಈ ವೈಫಲ್ಯವನ್ನ ಮರೆಮಾಚಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿನಿಯರಿಗೆ ಸಾಕಷ್ಟು ಬೆದರಿಕೆ ಕರೆಗಳೂ ಬರುತ್ತಿದ್ದು, ಈ ಕುರಿತು ವಿದ್ಯಾರ್ಥಿನಿಯರು ನಮ್ಮನ್ನ ಸಂಪರ್ಕಿಸಿದ್ದಾರೆ. ಪ್ರಕರಣವು ಕೋರ್ಟ್ ನಲ್ಲಿ ವಿಚಾರಣೆ ನಡೆಯುವಾಗ ವಿದ್ಯಾರ್ಥಿಗಳನ್ನು ಭಯಪಡಿಸುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿಗಳ ಆಂತರಿಕ ವಿಚಾರವನ್ನು ಬಹಿರಂಗ ಪಡಿಸುವವರಿಗೆ ಹಾಗೂ ಬೆದರಿಕೆ ಕರೆ ಮಾಡುವವರ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.