-ಮೈಮುನ ಅಸ್ಲಂ – ನ್ಯೂಸ್ ಪ್ಲಸ್ ಡೆಸ್ಕ್
ಹಿಜಾಬ್, ಕೇಸರಿ ಶಾಲು, ನೀಲಿ ಶಾಲು ವಿದ್ಯೆ ಕಲಿಯುವ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಕಾಣುತ್ತಿರುವ ದೃಶ್ಯ. ಯಾವ ಜನಾಂಗದಲ್ಲಿ ಇದ್ದೀವಿ ನಾವು? ಇಂದಿನ ಯುವ ವಿದ್ಯಾರ್ಥಿಗಳು ಈ ದೇಶವನ್ನು ಮುನ್ನಡೆಸುವ ನಾಳಿನ ಯುವ ಪ್ರಜೆಗಳಾಗಿರುತ್ತಾರೆ. ಆದ್ರೆ ಜ್ಯಾತ್ಯಾತೀತತೆಗೆ ಹೆಸರಾಗಿರುವ ನಮ್ಮ ಉಡುಪಿ ಜಿಲ್ಲೆಯಲ್ಲಿ ಈಗ ನಡೆಯುತ್ತಿರುವುದು ಏನು?
ಧರ್ಮದ ಹೆಸರಲ್ಲಿ ದೇಶದ ಏಕತೆ ಹಾಳಾಗದಿರಲಿ:
ವಿದ್ಯೆ ಕಲಿಯಲು ಬರುವ ಆ ಮುಗ್ಧ ಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತಲಾಗುತ್ತಿದೆ. ನಮ್ಮ ಧರ್ಮ ನಮಗೆ ಪ್ರಮುಖವಾಗಿರುವುದೇ ಆಗಿದೆ. ಆದ್ರೆ ಆ ಧರ್ಮದ ಹೆಸರಲ್ಲಿ ದೇಶದ ಏಕತೆ ಹಾಳಾಗಬಾರದು. ಹಿಂದೂ ಆಗಲಿ ಮುಸ್ಲಿಂ ಆಗಲಿ, ಕ್ರಿಶ್ಚಿಯನ್ ಆಗಲಿ ಅವರವರ ಧರ್ಮದ ಮೇಲೆ ಅವರವರಿಗೆ ಅಭಿಮಾನವಿದೆ. ನಮ್ಮ ಧರ್ಮ, ಆಚರಣೆ ನಡೆಸಲು ಭಾರತದ ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ. ಆದರೆ ಆ ಅವಕಾಶ ಹಕ್ಕನ್ನು ದುರುಪಯೋಗ ಮಾಡಿಕೊಳ್ಳಬಾರದು. ವಿದ್ಯಾ ಸಂಸ್ಥೆಯಲ್ಲಿರುವ ಶಿಕ್ಷಕರು ನಮಗೆ ಒಳ್ಳೆದನ್ನ ಹಂಚಿ ಕೊಡುವವರು. ನಮ್ಮ ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡುವವರು. ಆದ್ರೆ ಆ ದಾರಿಗೆ ಆ ವಿದ್ಯಾರ್ಥಿಗಳೇ ಮುಳ್ಳಿನ ಚಾಪೆಯನ್ನು ಹಾಸುತ್ತಿದ್ದಾರೆ.
ವಿದ್ಯೆ ಕಲಿಯುವ ಶಿಕ್ಷಣ ಸಂಸ್ಥೆ ರೀ ಅದು, ಅಲ್ಲಿ ನಿಮ್ಮ ಧರ್ಮ ವಾದ ಬೇಡ. ಧರ್ಮಾಚರಣೆ ಇರಲಿ. ಎಲ್ಲರಿಗೂ ಅವರವರ ನಂಬಿಕೆ ಆಚರಣೆಯ ಮೇಲೆ ಪ್ರೀತಿ ಇರುತ್ತೆ. ಅವರವರ ಧರ್ಮದ ಮೇಲೆ ಗೌರವ ಇರುತ್ತದೆ. ಅದು ಯಾರಿಗೂ ತೋರಿಸಿಕೊಂಡು ನಡೆಯುವಂತದಲ್ಲ. ನಮ್ಮತನ ನಮ್ಮ ಹೃದಯದಲ್ಲಿ ಇರಬೇಕು. ಯಾವುದೇ ರಾಜಕೀಯ ಪಕ್ಷಗಳಿಗಾಗಿ ನಮ್ಮ ಉತ್ತಮ ಭವಿಷ್ಯವನ್ನು ನಾವು ಹಾಳು ಮಾಡಿಕೊಳ್ಳಬಾರದು. ನಿಮ್ಮ ಧರ್ಮವನ್ನು ಅನುಸರಿಸಿ. ಅದಕ್ಕೆ ಈ ಭಾರತದ ಸಂವಿಧಾನ ಸಂಪೂರ್ಣ ಹಕ್ಕು ನೀಡಿದೆ. ಆದ್ರೆ ನಿಮ್ಮ ಕ್ಲಾಸ್ ರೂಮ್ ನ ಒಳಗೆ ಹೋಗುವಾಗ ಅವೆಲ್ಲವನ್ನೂ ಬಿಟ್ಟು ಬಿಡಿ. ಅಲ್ಲಿ ನೀವು ವಿದ್ಯೆ ಕಲಿಯಲು ಬಂದ ವಿದ್ಯಾರ್ಥಿಗಳು ಅಷ್ಟೇ. ಅಲ್ಲಿ ಬೇಕಾಗಿರುವುದು ಕೇವಲ ಶಿಕ್ಷಣವಷ್ಟೇ. ನಿಮ್ಮ ಶಿಕ್ಷಣಕ್ಕೆ ಒತ್ತು ನೀಡಿ. ದೇಶವನ್ನು ವಿಭಜಿಸುವ ಪಾಠ ಕಲಿಯಬೇಡಿ. ನಿಮ್ಮ ಶಿಕ್ಷಕರು ನೀಡುವ ಉತ್ತಮ ಜ್ಞಾನವನ್ನು ಸಂಪಾದಿಸಿ ದೇಶದ ಉತ್ತಮ ಪ್ರಜೆಗಳಾಗಿ ಬೆಳೆದು ಬನ್ನಿ.
ನಿಮ್ಮ ಮಕ್ಕಳ ಭವಿಷ್ಯವನ್ನ ನೀವೇ ಹಾಳು ಮಾಡ್ಬೇಡಿ:
ಇಷ್ಟು ಸಣ್ಣ ವಿದಾರ್ಥಿಗಳ ತಲೆಯಲ್ಲಿ ಧರ್ಮದ ಅಮಲಿನ ವಿಷ ಬೀಜ ಬಿತ್ತಿ ಕಳಿಸುವವರು ಒಂದು ಯೋಚನೆ ಮಾಡಿ. ನಿಮ್ಮ ಮಕ್ಕಳ ಉತ್ತಮ ಭವಿಷ್ಯವನ್ನ ನೀವೇ ಹಾಳು ಮಾಡುತ್ತಿದ್ದೀರಿ. ಈ ದೇಶದ ಏಕತೆಯನ್ನು ಅನ್ಯೋನ್ಯತೆಯನ್ನು ಹಾಳು ಮಾಡುತ್ತಿದ್ದೀರಿ. ಇದರ ಲಾಭ ಪಡೆಯುವವರು ಈ ದೇಶದ ಸಮಾನತೆಯನ್ನು ಕದಡಲು ಕಾಯುವ ಕೋಮುವಾದಿಗಳಷ್ಟೇ. ನೀವೇ ಯೋಚಿಸಿಕೊಳ್ಳಿ. ಜಾತಿ ಧರ್ಮ, ನಂಬಿಕೆ ಆಚರಣೆ, ಎಲ್ಲವನ್ನೂ ನಾನು ಅನುಸರಿಸುತ್ತಿದ್ದೇನೆ. ಆದರೆ ಅದು ನನ್ನ ವೈಯಕ್ತಿಕ ಹಕ್ಕು. ಈ ದೇಶದ ಸಂವಿಧಾನ ನನಗೆ ನೀಡಿರುವ ಹಕ್ಕು. ಇಲ್ಲಿ ನಾನು ಮಾತನಾಡುತ್ತಿರುವುದು ಒಬ್ಬಳು ಮುಸ್ಲಿಂ ಯುವತಿಯಾಗಿಯಲ್ಲ. ಈ ಭಾರತ ದೇಶದ ಪ್ರಜೆಯಾಗಿ. ಈ ದೇಶ ಜಾತಿಯ ಹೆಸರಿನಲ್ಲಿ ಒಡೆದು ಹೋಗಬಾರದು. ಸಂದರ್ಭಕ್ಕಾಗಿ ಕಾಯುವ ಕೋಮುವಾದಿಗಳಿಗೆ ಈ ವಿಷಯ ಬಾಡೂಟದಂತಾಗಬಾರದು. ವಿದ್ಯಾಭ್ಯಾಸಕ್ಕೆ ಪೂರಕವಾಗಿ ಮಾಡಿದ್ದ ಕೆಲವು ಸಾಮಾಜಿಕ ಜಾಲತಾಣಗಳ ಗ್ರೂಪ್ ಗಳಲ್ಲಿ ಉತ್ತಮ ವಿಷಯಗಳನ್ನು ಶೇರ್ ಮಾಡುವುದನ್ನು ಬಿಟ್ಟು ಕೋಮುವಾದ ಪ್ರಚೋದಿಸುವ ಮೆಸೇಜ್ ಗಳು ಶೇರ್ ಆಗದಿರಲಿ.
ಕೊರೋನಾಕ್ಕಿಂತ ಭೀಕರ ವೈರಸ್ ಧರ್ಮ ಭೇಧ:
ಇಲ್ಲಿ ಸರಕಾರ, ವಿವಿಧ ಸಂಘಟನೆಗಳೂ ಮಾಡುತ್ತಿರುವುದು ಅಷ್ಟೇ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಸಿ ತುಂಬಾನೇ ಸಾಫ್ಟ್ ಆಗಿ ವಿಷಯವನ್ನು ಪರಿಹರಿಸಬಹುದಿತ್ತು. ಆದರೆ ಇಲ್ಲಿ ಸರಕಾರ, ಸಂಘಟನೆಗಳು ಮಾಡುತ್ತಿರುವುದು ವಿದ್ಯಾರ್ಥಿಗಳನ್ನು ಪ್ರಚೋದಿಸುವ ಕೆಲಸ. ಕೇವಲ ಉಡುಪಿಯ ಸರಕಾರಿ ಕಾಲೇಜೊಂದರಲ್ಲಿ ಉಂಟಾದ ಸಮಸ್ಯೆ ಇಡೀ ಕರ್ನಾಟಕಕ್ಕೆ ಹಬ್ಬಿದೆ. ಇದು ಕೂಡಾ ಇಂತಹ ಗಲಭೆಗೆ ಮೂಲ ಕಾರಣವಾಗುತ್ತಿದೆ. ರಾಜಕೀಯ ಬೇಳೆ ಬೇಯಿಸಲು ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿದ್ದಾರೆ. ಅತ್ಯಂತ ಹೆಚ್ಚು ಯುವಕರು ಇರುವ ದೇಶ ನಮ್ಮದು. ಆ ಯುವ ಸಮುದಾಯ ಈ ರೀತಿ ಆದರೆ ನಮ್ಮ ದೇಶದ ಸ್ಥಿತಿ ಏನಾಗುತ್ತೆ? ಒಮ್ಮೆ ಆಲೋಚಿಸಿ. ಕೊರೋನಾಕ್ಕಿಂತ ಭೀಕರ ವೈರಸ್ ಧರ್ಮ ಭೇಧ ಎನ್ನುವುದು. ಆ ವೈರಸ್ ಅನ್ನು ವಿದ್ಯಾರ್ಥಿಗಳ ಮನಸ್ಸಿನಿಂದ ತೆಗೆದು ಹಾಕದಿದ್ದರೆ ದೇಶ ಭೀಕರ ಪರಿಸ್ಥಿಯತ್ತ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಷ್ಟು ಕಾಲ ಕೋವಿಡ್ ಬಂದು ವಿದ್ಯೆ ಇಲ್ಲದೆ ಮನೆಯಲ್ಲಿ ಕುಳಿತುಕೊಂಡ ವಿದ್ಯಾರ್ಥಿಗಳು ಈಗಷ್ಟೇ ಕಾಲೇಜ್ ಮೆಟ್ಟಿಲು ಹತ್ತುತ್ತಿದ್ದಾರೆ. ಆದ್ರೆ ಈಗ ಕಾಲೇಜಿನಲ್ಲಿ ನಡೆಯುತ್ತಿರುವುದು ಏನು?ಪರಸ್ಪರ ಪ್ರೀತಿಯಿಂದ ಅಣ್ಣ ತಂಗಿಯಂತೆ ಇದ್ದ ವಿದ್ಯಾರ್ಥಿಗಳು ಇದೀಗ ಶತ್ರುಗಳಾಗಿ ಮಾರ್ಪಟ್ಟಿದ್ದಾರೆ. ಇದಕ್ಕೆ ದಾರಿ ತೋರಿಸಿದವರು ಯಾರು? ನಿಮ್ಮನ್ನೇ ನೀವು ಪ್ರಶ್ನಿಸಿ.
ಆ ವಿದ್ಯಾರ್ಥಿಗಳ ಮನಸ್ಸಿಗೆ ಹುಳಿ ಹಿಂಡಿ ಕಳಿಸುತ್ತಿರುವವರು ಯಾರು? ಒಂದು ಕಡೆ ಹಿಜಾಬ್, ಕೇಸರಿ ಶಾಲು ಇನ್ನೊಂದು ಕಡೆ ನೀಲಿ ಶಾಲು, ಏನಿದು ಅವಸ್ಥೆ ಶಿಕ್ಷಣ ಕಲಿಸುವ ಪವಿತ್ರವಾದ ನೆಲದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಈ ಗಲಭೆ ನೋಡಿ ನಮ್ಮ ದೇಶದ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪುತ್ತಿದೆ ಅಂತ ಯೋಚಿಸಿ ನೋವಾಗುತ್ತಿದೆ. ಇದರ ಲಾಭ ಪಡೆಯುವವರು ಕಿಡಿ ಹಚ್ಚಿ ಮುಗುಳ್ನಗುತ್ತಿದ್ದಾರೆ. ಬಲಿ ಪಶುಗಳಾಗುತ್ತಿರುವುದು ವಿದ್ಯಾರ್ಥಿಗಳು. ಅವರ ಉತ್ತಮ ಭವಿಷ್ಯ.
ನಮ್ಮ ಕಾಲೇಜು ಜೀವನದಲ್ಲಿ ಇಂತಹ ಯಾವುದೇ ಸಮಸ್ಯೆಗಳೂ ಇರಲಿಲ್ಲ. ಎಷ್ಟು ಖುಷಿಯಾಗಿತ್ತು ಆ ಕಾಲೇಜ್ ಲೈಫ್. ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಎಷ್ಟೊಂದು ಅನ್ಯೋನ್ಯತೆ ಏಕತೆಯಿಂದ ನಾವೆಲ್ಲಾ ಇದ್ವಿ. ಉತ್ತಮ ಶಿಕ್ಷಣವನ್ನು ಪಡೆದು ನಮ್ಮ ಭವಿಷ್ಯವನ್ನು ನಾವು ಕಟ್ಟಿಕೊಂಡೆವು. ಆದ್ರೆ ಈಗ ಆ ಮುಗ್ದ ಮಕ್ಕಳ ಇಂತಹ ಮನಸ್ಥಿಯನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವನಿಸುತ್ತಿದೆ.
ಸಂಘರ್ಷಕ್ಕೆ ದಾರಿಯಾಗ್ಬೇಡಿ, ಸಾಮರಸ್ಯಕ್ಕೆ ಸ್ಪೂರ್ತಿಯಾಗಿ:
ವಿದ್ಯಾರ್ಥಿಗಳೇ ಬೇರೆ ಯಾರ ಮಾತಿಗೂ ಕಿವಿಕೊಡಬೇಡಿ. ಒಮ್ಮೆ ಕುಳಿತು ಚಿಂತಿಸಿ. ಶಿಕ್ಷಣ ಸಂಸ್ಥೆಯಲ್ಲಿ ಜಾತಿ ಧರ್ಮವಿಲ್ಲ. ಅಲ್ಲಿ ನೀವು ವಿದ್ಯಾರ್ಥಿಗಳು ಒಂದು ತರಗತಿಯೊಳಗೆ ಒಂದು ಕುಟುಂಬದಂತೆ ಸಹೋದರ ಸಹೋದರಿಯಂತೆ ಇರಬೇಕು. ನಿಮಗೆ ಶಿಕ್ಷಣ ನೀಡಲು ಬರುವ ನಿಮ್ಮ ಶಿಕ್ಷಕರು ನಿಮಗೆ ಬದುಕಿಗೆ ಬೆಳಕು ನೀಡುವ ನಿಮ್ಮ ತಂದೆ ತಾಯಿಯಂತೆ ತಿಳಿದುಕೊಳ್ಳಿ. ಅವರ ಮಾತಿಗೆ ಗೌರವ ನೀಡಿ ಅವರು ಹೇಳುವ ಪಾಠವನ್ನು ಕಲಿಯಿರಿ. ನಿಮ್ಮ ಭವಿಷ್ಯವನ್ನು ಕಟ್ಟುಕೊಳ್ಳಿ. ನಾಳೆ ನಿಮ್ಮ ಜೀವನದಲ್ಲಿ ಸಮಸ್ಯೆ ಬಂದಾಗ ನೀವೊಬ್ಬರೇ ಅದನ್ನು ಎದುರಿಸಬೇಕು. ನಿಮ್ಮ ಕಷ್ಟಕ್ಕೆ ನೀವು ಮಾತ್ರ ಇರುತ್ತೀರ. ಅಲ್ಲಿ ಈಗ ನಿಮಗೆ ಸಾಥ್ ಕೊಟ್ಟ ಒಬ್ಬರೂ ಬರುವುದಿಲ್ಲ. ಸುಮ್ಮನ್ನೆ ಜಾತಿ ಹೆಸರಲ್ಲಿ ನಿಮ್ಮ ಭವಿಷ್ಯವನ್ನು ನೀವು ಹಾಳು ಮಾಡಬೇಡಿ. ಸೌಹಾರ್ದ ಪ್ರೀತಿಯಿಂದ ನಾವೆಲ್ಲಾ ಸೇರಿ ದೇಶದ ಅಭಿವೃದ್ಧಿಗೆ ಶ್ರಮಿಸುವ.