ಕುಂದಾಪುರ: ಒಬ್ಬ ಹರ್ಷನನ್ನು ಹತ್ಯೆಗೈದರೆ ಇಡೀ ಹಿಂದೂ ಸಮಾಜ ದೃತಿಗೆಡುತ್ತದೆ ಎಂಬ ನಂಬಿಕೆ ಇದ್ದರೆ ಅದನ್ನು ಇವತ್ತೇ ಬಿಟ್ಟು ಬಿಡಿ. ಪ್ರತೀ ಗ್ರಾಮದಲ್ಲೂ ಹರ್ಷ ಹುಟ್ಟುತ್ತಾನೆ. ಪ್ರತೀ ಗ್ರಾಮದಲ್ಲೂ ಹಿಂದೂ ಕಾರ್ಯಕರ್ತ ಹುಟ್ಟಿಕೊಳ್ಳುತ್ತಾನೆ. ನಿಮ್ಮ ಸವಾಲನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಚಟುವಟಿಕೆಗಳನ್ನು ದ್ವಿಗುಣಗೊಳಿಸುತ್ತೇವೆ. ಎಂದು ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಎಚ್ಚರಿಕೆ ನೀಡಿದರು.
ಬಿಜೆಪಿ ನೇತೃತ್ವದಲ್ಲಿ ಶಿವಮೊಗ್ಗ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಕುಂದಾಪುರದ ಶಾಸ್ತ್ರೀ ಪ್ರತಿಮೆ ಬಳಿ ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ ದಿವಸದಲ್ಲಿ ಬಿಜೆಪಿಯ ವಕೀಲರ ವೇದಿಕೆಯಿಂದ ಹರ್ಷ ಹತ್ಯೆಮಾಡಿದ ನೈಜ ಆರೋಪಿಗಳಿಗೆ ನೇಣು ಶಿಕ್ಷೆ ಆಗುವ ತನಕ ನಾವು ವಿರಮಿಸುವುದಿಲ್ಲ. ಅವರ ವಿರುದ್ಧ ಹೋರಾಡುತ್ತೇವೆ. ಕೋರ್ಟ್ನಲ್ಲಿ ಆರೋಪಿಗಳ ವಿರುದ್ಧ ವಾದ ಮಾಡಿ ಅವರಿಗೆ ನೇಣು ಶಿಕ್ಷೆ ಕೊಡಿಸುವ ಸಂಕಲ್ಪ ಮಾಡುತ್ತೇವೆ. ಹರ್ಷ ಅವರ ಮನೆಯವರಿಗೆ ಆರ್ಥಿಕ ಸಹಾಯದೊಂದಿಗೆ ನೈತಿಕ ಸಹಾಯ ಮಾಡುತ್ತೇವೆ ಎಂದರು.
ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ, ನಾವು ಈ ಕೊಲೆಗೆ ಪ್ರತಿಕಾರವನ್ನು ಕೇಳುತ್ತಿಲ್ಲ.ಕೊಲೆ ಮಾಡಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಇಂತಹ ಪ್ರಕರಣಗಳು ಮುಂದೆ ನಡೆಯಬಾರದು. ಈ ಕೊಲೆಗೆ ನಮಗೆ ಪರಿಹಾರ ಸಿಗಬೇಕು. ಪರಿಹಾರ ಸಿಗದೆ ನಾವು ವಿರಮಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಯುವ ಮೋಚಾ ಅಧ್ಯಕ್ಷ ಅವಿನಾಶ ಉಳ್ತೂರು, ಕುಂದಾಪುರ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಅಶ್ವಿನಿ ಪ್ರದೀಪ್, ಮಹಿಳಾ ಮೋರ್ಚಾದ ಸೌರಭಿ ಪೈ, ಮುಖಂಡರಾದ ಸುನೀಲ್ ಹೇರಿಕುದ್ರು, ಗೋಪಾಲ ಕಳಿಂಜೆ, ಮೀನುಗಾರಿಕಾ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು ಮತ್ತಿತರು ಉಪಸ್ಥಿತರಿದ್ದರು.