ವಿಶಾಖಪಟ್ಟಣಂ: ಮೀನುಗಾರಿಕೆಯಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ಕಷ್ಟ ಹಾಗೂ ಅಪಾಯ ಕೂಡ ಇದೆ. ಕೆಲವೊಮ್ಮೆ ಮೀನುಗಾರಿಕೆ ಮಾಡುವಾಗ ಕೆಲವು ಅಪಾಯಕಾರಿ ಮೀನುಗಳ ಆಕ್ರಮಣಕ್ಕೆ ಮೀನುಗಾರರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಸ್ಥಿತಿ ಬರುತ್ತದೆ. ಇಂತಹದೇ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ವಿಶಾಖಪಟ್ಟಣಂನಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಮುತ್ಯಾಲಮ್ಮಪಾಲೆಂ ಸಮುದ್ರಕ್ಕೆ ಮೀನುಗಾರರ ತಂಡವೊಂದು ಮೀನುಗಾರಿಕೆಗೆ ತೆರಳಿದ್ದು, ಸಮುದ್ರದ ಮಧ್ಯೆ ವಿಶಾಖಪಟ್ಟಣಂನ ನಿವಾಸಿ ಜೋಗಣ್ಣ ಅವರನ್ನು ಬ್ಲ್ಯಾಕ್ ಮರ್ಲಿನ್ ಎಂಬ ಮೀನು ತನ್ನ ಚೂಪಾದ ಕೊಕ್ಕಿನಿಂದ ಇರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೀನುಗಾರಿಕೆಗೆ ತೆರಳಿದ್ದ ವೇಳೆ 70 ರಿಂದ 80 ಕೆ.ಜಿ ತೂಕದ ಬ್ಲ್ಯಾಕ್ ಮರ್ಲಿನ್ ಮೀನು ಬಲೆಗೆ ಸಿಕ್ಕಿ ಬಿದ್ದಿತ್ತು. ಈ ಸಂದರ್ಭ ಬಲೆಯನ್ನು ಮೇಲೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಜೋಗಣ್ಣ ಅವರು ನೀರಿಗಿಳಿದು ಬಲೆಯನ್ನು ಎಳೆಯಲು ಯತ್ನಿಸಿದ್ದು, ಆಗ ಈ ಮೀನು ತನ್ನ ಚೂಪಾದ ಕೊಕ್ಕಿನಿಂದ ಜೋಗಣ್ಣ ಅವರಿಗೆ ಇರಿದು ತಪ್ಪಿಸಿಕೊಂಡು ಹೋಗಿದೆ. ಪರಿಣಾಮ ಜೋಗಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೀನುಗಾರರು ಜೋಗಣ್ಣ ಅವರನ್ನು ತಕ್ಷಣ ಮೇಲೆಳೆದು ತಂದಿದ್ದಾರೆ. ಜೋಗಣ್ಣ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.