ಕಠ್ಮಂಡು: ‘ಹಿಮಾಲಯನ್ ವಯಾಗ್ರಾ’ ಹುಡುಕುತ್ತಿದ್ದ ನಾಲ್ವರು ಮಹಿಳೆಯರು ಸೇರಿ ಐವರು ಹಿಮಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದಾರೆ. ಡಾರ್ಕುಲಾ ಬ್ಯಾನಸ್ ಎಂಬ ಹಳ್ಳಿಯ ಪರ್ವತ ಪ್ರದೇಶದಲ್ಲಿ ಹಿಮ ಕುಸಿತವಾಗಿದೆ.ನೇಪಾಳದ ಪರ್ವತ ಜಿಲ್ಲೆಯಾದ ಡಾರ್ಕುಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾಣೆಯಾದವರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಎಂಟು ತಂಡಗಳಿಂದ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಡಾರ್ಕುಲಾ ಎಸ್ಪಿ ಪ್ರದೀಪ್ ಸಿಂಗ್ ಧಾಮಿ ತಿಳಿಸಿದ್ದಾರೆ.ಹಿಮಾಲಯನ್ ವಯಾಗ್ರ ಅಥವಾ ಯರ್ಸ್ಗುಂಬಾ ಎಂಬ ಅಣಬೆ ಜಾತಿಯ ಪರಾವಲಂಬಿ ಸಸ್ಯ 5000 ಮೀಟರ್ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದನ್ನು ಸಾಂಪ್ರದಾಯಿಕ ಚೀನಿ ಔಷಧ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಕಾಮೋತ್ತೆಜಕ ಮಾತ್ರೆಗಳಲ್ಲಿ ಹಾಗೂ ಹೃದಯ, ಮೂತ್ರಪಿಂಡ ಸಮಸ್ಯೆಗಳಲ್ಲಿ ಇದನ್ನು ಬಳಸುತ್ತಾರೆ. ನೇಪಾಳದಲ್ಲಿ ಸಾಮಾನ್ಯವಾಗಿ ಮೇನಲ್ಲಿ ಸ್ಥಳೀಯರು ಯರ್ಸ್ಗುಂಬಾ ಉತ್ಸವ ಆಚರಿಸಿ ಈ ಸಸ್ಯದ ಶೋಧದಲ್ಲಿ ತೊಡಗುತ್ತಾರೆ.