ಸುಳ್ಯ:ಸುಳ್ಯದಲ್ಲಿ ಕಸ ವಿಲೇವಾರಿ ಸಮಸ್ಯೆ ನಗರಾಡಳಿತಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದಂತಿದ್ದು, ಈ ಸಮಸ್ಯೆಯ ಬಗ್ಗೆ ಸುಳ್ಯ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ತುರ್ತು ಸಭೆ ಕರೆದು ನಗರದ ಕಸ ವಿಲೇವಾರಿ ಕೂಡಲೇ ಆಗಬೇಕು ಎಂದು ತಾಕೀತು ಮಾಡಲಾಗಿತ್ತು.
ಇದೀಗ ಸುಳ್ಯದ ಕಸ ಸಮಸ್ಯೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಪ್ರಖ್ಯಾತ ನಟ, ಗಾಯಕ ಹಾಗೂ ನಿರ್ದೇಶಕರಾದ ಅನಿರುದ್ದ್ ಅವರು ಸುಳ್ಯದ ನಗರ ಪಂಚಾಯತ್ ಕಸವನ್ನು ತೆರವು ಮಾಡಲು ಮುತುವರ್ಜಿ ವಹಿಸುವಂತೆ ವಿನಂತಿಸಿದ್ದಾರೆ.
ಅನಿರುದ್ದ್ ಅವರಿಗೆ ಸುಳ್ಯ ನಗರದ ಕಸ ಸಮಸ್ಯೆ ತಿಳಿಸಿ, ಆ ವಿಡಿಯೋ ಶೇರ್ ಮಾಡಿದ ಬಿಜೆಪಿಯ ಸುಳ್ಯ ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿಯ ವಾಟ್ಸಪ್ ಗ್ರೂಪಿನಿಂದ ಸುಳ್ಯ ಬಿಜೆಪಿಯ ಕಾರ್ಯದರ್ಶಿ ಶುಭೋದ್ ಶೆಟ್ಟಿ ಅವರು ತೆರವುಗೊಳಿಸಿರುವುದು ಈಗ ಚರ್ಚೆಗೀಡು ಮಾಡಿದೆ.
ಈ ಮೊದಲು ಮಾನ್ಯ ಸುಳ್ಯ ನ್ಯಾಯಾಧೀಶರಾದ ಸೋಮಶೇಖರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮಾಡುವಂತೆ ನಗರ ಪಂಚಾಯತಿಗೆ ಸೂಚನೆ ನೀಡಿದ್ದರು. ಆದರೆ ಇನ್ನೂ ಕೂಡ ಅಲ್ಲಿ ಕಸ ವಿಲೆವಾರಿ ಮಾಡದರಿವುದು ವಿಪರ್ಯಾಸ.