ಹೆಬ್ರಿ: ಉಡುಪಿಯಲ್ಲಿ ಆರಂಭವಾಗಿರುವ ಹಿಜಾಬ್ ಪ್ರಕರಣ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕುತಂತ್ರ. ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆಯುತ್ತಿರುವುದು ದುರಂತವೇ ಸರಿ. ಇದು ನಮ್ಮ ಊರನ್ನು ತಾಲಿಬಾನ್ ಮಾಡುವ ಮುನ್ಸೂಚನೆಯಾಗಿದೆ. ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದೇ ಈ ಪ್ರಕರಣಕ್ಕೆ ಅಂತ್ಯ ಹಾಕಬೇಕಿದೆ. ನೂತನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಅಮ್ಮನವರ ನೂತನ ಶಿಲಾಮಯ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ನಡೆದ ೨ನೇ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಧರ್ಮ ಬಿಟ್ಟು ಬದುಕು ಇಲ್ಲ, ನಮ್ಮ ಧರ್ಮವನ್ನು ನಾವು ಉಳಿಸಿದರೆ ಬದುಕು ಉಳಿಯುತ್ತದೆ. ಭಕ್ತಿಯಿಂದ ಇದೆಲ್ಲಾ ಸಾಧ್ಯವಾಗುತ್ತದೆ, ಧರ್ಮ ಸಂಸ್ಕೃತಿ ರಾಜಕೀಯದ ಅಸ್ತ್ರ ಆಗಬಾರದು. ಎಲ್ಲಾ ರಾಜಕಾರಣಿಗಳು ಧರ್ಮವನ್ನು ಸಂರಕ್ಷಿಸಿ ಧರ್ಮದ ಮಾರ್ಗದಲ್ಲಿಯೇ ನಡೆಯಬೇಕು ಎಂದರು.
ಇನ್ನು, ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಮಂಜುನಾಥ ಹೆಗ್ಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರಾದ ದೇವಸ್ಥಾನದ ಕಾಷ್ಠಶಿಲ್ಪಿ ಉಡುಪಿ ಮಾಧವ ಆಚಾರ್ಯ, ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಶುಭಧರ ಶೆಟ್ಟಿ ಮುದ್ರಾಡಿ, ಮಾಜಿ ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ, ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡಿದ ಸುಧಾಕರ ಭಂಡಾರಿ ಸಹಿತ ಹಲವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ, ಸೂರತ್ ಉದ್ಯಮಿ ಮುದ್ರಾಡಿಮನೋಜ್ ಸಿ ಪೂಜಾರಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಿವೃತ್ತ ಡೆಪ್ಯೂಟಿ ಮ್ಯಾನೇಜರ್ ಹೆಬ್ರಿ ಟಿ.ಜಿ. ಆಚಾರ್ಯ, ಉದ್ಯಮಿ ಪ್ರಸನ್ನ ಸುಡ ಶಿವಪುರ, ವಾಸ್ತು ತಜ್ಞ ಪ್ರಮಲ್ ಕುಮಾರ್, ರಂಗ ನಟ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್, ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಗದ ಅಧ್ಯಕ್ಷ ಭೋಜ ಪೂಜಾರಿ ಬೈದರಬೆಟ್ಟು, ದೇವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ ಮೋಹನ್, ಕಾರ್ಯದರ್ಶಿ ಗಣಪತಿ ಎಂ, ಸಹ ಕಾರ್ಯದರ್ಶಿ ನವೀನ್ ಕೋಟ್ಯಾನ್, ಕ್ಷೇತ್ರದ ಮಾತೆ ಕಮಲಾ ಮೋಹನ್, ಸುರೇಂದ್ರ ಮೋಹನ್ , ಸುಧೀಂದ್ರ ಮೋಹನ್, ಉಮೇಶ್ ಕಲ್ಮಾಡಿ, ವಿವಿಧ ಸಮಿತಿಗಳ ಪ್ರಮುಖರು, ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಕುಮಾರ್ ಮೋಹನ್ ಸ್ವಾಗತಿಸಿ, ಪ್ರಜ್ಞಾ ನಿರೂಪಿಸಿದರು.