ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ [ಶುಕ್ರವಾರ] ಸಿಎಂ ಜೊತೆ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡುವ ಅಂತಿಮ ನಿರ್ಣಯದ ನಂತರ ಸಿಎಂ ಜೊತೆ ಚರ್ಚಿಸಿ ಮಹಾನಗರಗಳಲ್ಲಿ ಶಾಲೆಗಳನ್ನು ತೆರೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ. ಶೈಕ್ಷಣಿಕ ದೃಷ್ಟಿಯಿಂದ ನೋಡುವುದಾದರೆ ಶಾಲೆಗಳನ್ನು ತೆರೆಯಬಹುದು. ನಿನ್ನೆ 1250, 1-10 ನೇ ತರಗತಿ ಮಕ್ಕಳಲ್ಲಿ, 166 ಪಿಯುಸಿಯ ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಪ್ರಸ್ತುತ 6752 ಸಕ್ರಿಯ ಪ್ರಕರಣಗಳು 1-10 ನೇ ತರಗತಿಯ ಮಕ್ಕಳಲ್ಲಿ, 897 ಸಕ್ರಿಯ ಪ್ರಕರಣಗಳು ಪಿಯುಸಿ ಮಕ್ಕಳಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಇಲಾಖೆಯು ಕಳೆದ ಎರಡು ಕೋವಿಡ್ ಅಲೆಗಳಲ್ಲಿ ಆದ ಸಮಸ್ಯೆಗಳ ಕುರಿತು ಹಿಂದಿನ ಸಿಎಂ ನೇತೃತ್ವದ ಸಭೆಯಲ್ಲಿ ತಿಳಿಸಿದ್ದೆವು. ರಾಜ್ಯದಲ್ಲಿ ಹಿಂದಿನ ಬಾರಿ ಮಾಡಿದಂತೆ ಒಮ್ಮೆಗೆ ಶಾಲೆಗಳನ್ನು ಮುಚ್ಚಬಾರದೆಂಬ ನಿರ್ಣಯವನ್ನು ತೆಗೆದುಕೊಂಡೆವು. ಹಾಗೂ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ಣಯ ತೆಗೆದುಕೊಳ್ಳುವಂತಹ ಜವಾಬ್ದಾರಿ ನೀಡಲಾಗಿತ್ತು. ಪ್ರಸ್ತುತ ಅನೇಕ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಶಾಲೆಗಳು ಮುಚ್ಚಿಲ್ಲ. ಮೈಸೂರು, ತುಮಕೂರು ಸೇರಿ ಕೆಲವು ಮಹಾನಗರಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಇದುವರೆಗೆ ಕೊರೋನಾದಿಂದ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಉಂಟಾಗಿಲ್ಲ. ಶಾಲೆಗಳ ಸ್ಥಿತಿಗತಿಗಳ ಕುರಿತು ತಾಂತ್ರಿಕ ಸಲಹಾ ಸಮಿತಿಗೆ ವಿವರ ನೀಡಲಿದ್ದೇವೆ. ಶೇಕಡ 80 ರಷ್ಟು ಸಿಲೆಬಸ್ ಮುಗಿಸಲಾಗಿದೆ. ಮಕ್ಕಳ ಪಾಸಿಟಿವಿಟಿ ದರವನ್ನು ವಿಶ್ಲೇಷಿಸಲಾಗಿದೆ. ನಾಳೆ ನಡೆಯುವ ಸಿಎಂ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.