ಉಡುಪಿ/ಮಂಗಳೂರು: ಕರಾವಳಿ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಹಲವೆಡೆ ಭಾರೀ ನಷ್ಟ ಉಂಟಾಗಿದೆ.
ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರೀ ಸೆಖೆ ಹಾಗೂ ತೀವ್ರ ಉರಿ, ಧಗೆ ಇದ್ದು, ದಿನವಿಡೀ ಮೋಡ ಕವಿದ ವಾತಾವರಣ ಕಂಡುಬರುತ್ತಿತ್ತು. ಭಾನುವಾರ ರಾತ್ರಿ ದ.ಕ.ದ ಕಡಬ, ಬಟ್ವಾಂಳ, ಬೆಳ್ತಂಗಡಿ, ಸುಳ್ಯ, ಮಂಗಳೂರು ಮುಂತಾದ ಕಡೆಗಳಲ್ಲಿ ಹಾಗೂ ಉಡುಪಿಯ ಕುಂದಾಪುರ, ಗಂಗೊಳ್ಳಿ, ಕೋಟೇಶ್ವರ, ತೆಕ್ಕಟ್ಟೆ, ಬಸ್ರೂರು ಮೊದಲಾದೆಡೆ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.
ಕುಂದಾಪುರ ನಗರದಲ್ಲಿ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಅಡಚಣೆಯುಂಟಾಗಿದ್ದು, ಕೆಲವೆಡೆ ಗಾಳಿ ಮಳೆಯಿಂದಾಗಿ ಕೆಲ ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು. ಗಂಗೊಳ್ಳಿಯಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು, ವಿದ್ಯುತ್ ಪರಿಕರಗಳಿಗೆ ಹಾಗೂ ಜಾನುವಾರು ಕೊಟ್ಟಿಗೆಗೆ ಹಾನಿಯುಂಟಾಗಿದೆ. ಹಾಗೂ ಹಲವೆಡೆ ಮರಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್ ಕಡಿತಗೊಂಡಿತ್ತು.