ಕುಂದಾಪುರ: ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟ್ ಬಳಿಯೇ ತಡೆದು ನಿಲ್ಲಿಸಿ, ವಿದ್ಯಾರ್ಥಿನಿಯರು ಹಾಗೂ ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದಿದೆ.
ಕಾಲೇಜು ಮುಖ್ಯಸ್ಥರು ಸರ್ಕಾರದ ಆದೇಶದಂತೆ ಕಾಲೇಜು ವಸ್ತ್ರಸಂಹಿತೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ನಿನ್ನೆಯೇ ಸೂಚಿಸಿದ್ದರು. ಆದರೆ ಇಂದು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರಿಂದ ಕಾಲೇಜು ಆವರಣ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು.
ಕಾಲೇಜು ಗೇಟ್ ಹೊರಗಡೆ ನಿಂತ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ನಾವು ಭಾರತದ ಪ್ರಜೆಗಳು, ಭಯೋತ್ಪಾದಕರಲ್ಲ, ನಮಗೂ ಕಲಿಕೆಗೆ ಅವಕಾಶ ಕೊಡಿ ಎಂದು ಕಣ್ಣೀರಿಡುತ್ತಾ ಮನವಿ ಮಾಡಿದರು. ಮಧ್ಯಾಹ್ನದವರೆಗೂ ಕೂಡ ವಿದ್ಯಾರ್ಥಿಗಳು ಕಾಲೇಜು ಆವರಣದ ಹೊರಗೆ ನಿಂತಿರುವ ದೃಶ್ಯ ಕಂಡುಬಂತು.