ಕಾಪು: ಹಿಜಾಬ್ ಪ್ರಕರಣದ ಹೈಕೋರ್ಟ್ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತಪಡಿಸಿ ಗುರುವಾರ ಮುಸ್ಲಿಂ ಸಂಘಟನೆಗಳು ರಾಜ್ಯದಾದ್ಯಂತ ಬಂದ್ ಆಚರಣೆ ಮಾಡಿತ್ತು. ಇದರ ಬೆನ್ನಲ್ಲೆ ಇತಿಹಾಸ ಪ್ರಸಿದ್ದ ಕಾಪು ಮಾರಿ ಪೂಜೆಯಲ್ಲಿ ಯಾವುದೇ ಮುಸ್ಲಿಂ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ನೀಡದಂತೆ ಕೋರಿ ಕಾಪು ಪುರಸಭೆಯ ಮುಖ್ಯಾಧಿಕಾರಿಗೆ ಹಾಗೂ ಕಾಪುವಿನ ಮೂರು ಮಾರಿಗುಡಿಯ ಆಡಳಿತ ಮಂಡಳಿಗೆ ಪತ್ರ ಮುಖೇನ ಮನವಿ ಸಲ್ಲಿಸಲಾಯಿತು.
ಈ ಮನವಿ ಪತ್ರದಲ್ಲಿ ಕಾಪು ಪುರಸಭೆ ವ್ಯಾಪ್ತಿಗೆ ಬರುವ ಪಡು ಗ್ರಾಮದ ಮೂರು ಮಾರಿಗುಡಿಗಳಲ್ಲಿ ಮಾ.22 ಮತ್ತು ಮಾ.23ರಂದು ನಡೆಯುವ ಮಾರಿಪೂಜೆಯಲ್ಲಿ ಯಾವುದೇ ಮುಸ್ಲಿಂ ಸಮುದಾಯದವರಿಗೆ ಅಂಗಡಿ/ಸ್ಟಾಲ್ಗಳನ್ನು ನಡೆಸಲು ಅವಕಾಶ ಕೊಡಬಾರದು. ಒಂದು ವೇಳೆ ಮುಸ್ಲಿಂ ಸಮುದಾಯದವರಿಗೆ ಅಂಗಡಿ/ಸ್ಟಾಲ್ಗಳನ್ನು ನಡೆಸಲು ಅವಕಾಶಕೊಟ್ಟರೆ ಅದರಿಂದ ಉಂಟಾಗುವ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ ನೀವೆ ಜವಾಬ್ದಾರರು. ಆದುದರಿಂದ ತಾವು ಮುಸ್ಲಿಂ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ಕೊಡಬಾರದದೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಉಲ್ಲೇಖಿಸಲಾಗಿದೆ.