ಉಡುಪಿಯಲ್ಲಿ ಹೊತ್ತಿದ್ದ ಹಿಜಾಬ್ ವಿವಾದದ ಕಿಡಿ ಇದೀಗ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ. ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಇದು 21 ನೇ ಶತಮಾನ. ಈಗ ಮಹಿಳೆಯರಿಗೆ ಎಲ್ಲಾ ರೀತಿಯ ಸಮಾನತೆ ದೊರೆತಿದ್ದು, ಹಿಜಾಬ್, ನಿಖಾಬ್ ಹಾಗೂ ಬುರ್ಖಾಗಳು ಶೋಷಣೆಯ ಸಂಕೇತ ಎಂದು ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಯಲ್ಲಿರಬೇಕು. ಶಿಕ್ಷಣದ ಹಕ್ಕೇ ಧಾರ್ಮಿಕ ಹಕ್ಕು. ಕೆಲ ಮುಸ್ಲಿಮರು ಹಿಜಾಬ್ ತುಂಬಾ ಅಗತ್ಯ ಅಂಶವೆಂದು ಪರಿಗಣಿಸುತ್ತಾರೆ. ಆದರೆ ಹಿಜಾಬ್ ಅವರು ತಿಳಿದಷ್ಟು ಮುಖ್ಯ ಅಂಶವಲ್ಲ. ಏಳನೇ ಶತಮಾನದಲ್ಲಿ ಹಿಜಾಬ್ ಅನ್ನು ಸ್ತ್ರೀಯರು ತಮ್ಮನ್ನು ರಕ್ಷಿಸಿಕೊಳ್ಳಲು, ಮುಖ ಮುಚ್ಚಿಕೊಂಡು ಓಡಾಡಲು ಹಿಜಾಬ್, ಬುರ್ಕಾಗಳನ್ನು ಧರಿಸುತ್ತಿದ್ದರು. ಹಿಜಾಬ್, ನಿಖಾಬ್, ಬುರ್ಖಾಗಳು ಶೋಷಣೆ ಸಂಕೇತ. ಇವು ಮಹಿಳೆಯರಿಗೆ ಹಾಗೂ ಪುರುಷರಿಗೆ ಅವಮಾನ ಮಾಡುವ ವಸ್ತುಗಳು. ಭಾರತ ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ಶಾಲಾ-ಕಾಲೇಜುಗಳು ಜಾತ್ಯಾತೀತತೆಯ ಸಂಕೇತಗಳು. ಆದ್ದರಿಂದ ಇಲ್ಲಿನ ವಸ್ತ್ರಸಂಹಿತೆ ಏಕರೂಪವಾಗಿರಬೇಕು. ವಿದ್ಯಾರ್ಥಿಗಳು ಧರ್ಮಕ್ಕಿಂತ ಶಿಕ್ಷಣ ಮುಂಖ್ಯವೆಂಬ ಭಾವನೆ ಬೆಳೆಸಿಕೊಳ್ಳಬೇಕು. ಧಾರ್ಮಿಕ ನಂಬಿಕೆಗಳು, ಆಚರಣೆಗಳನ್ನು ಪಾಲಿಸುವುದು ತಪ್ಪಲ್ಲ. ಆದರೆ ಅದನ್ನು ಶಿಕ್ಷಣ ಸಂಸ್ಥೆಗಳ ಆಚೆಗೆ, ಮನೆಯಲ್ಲಿ ಪಾಲಿಸಿದರೆ ಸಾಕು. ವ್ಯಕ್ತಿ ತನ್ನ ಗುರುತನ್ನು ಧರ್ಮದೊಂದಿಗೆ ನಂಟು ಹಾಕಿಕೊಳ್ಳಬಾರದೆಂದು ತಸ್ಲೀಮಾ ನಸ್ರೀನ್ ತಿಳಿಸಿದ್ದಾರೆ.