ಹೆಬ್ರಿ: ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮವು ಜನಸಾಮಾನ್ಯರಿಗೆ ತಲುಪುವ ದೊಡ್ಡ ಕಾರ್ಯಕ್ರಮವಾಗಿದೆ ಎಂದು ಉದ್ಯಮಿ ವಾದಿರಾಜ ಶೆಟ್ಟಿಯವರು ಹೇಳಿದರು.
ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಹೆಬ್ರಿ ವಲಯದ ಸುಮಾರು ೭ ಸಾಮಾನ್ಯ ಸೇವಾ ಕೇಂದ್ರದ ವಲಯ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಕೈಗೊಳ್ಳುವ ಪ್ರತಿಯೊಂದು ಯೋಜನೆ ಜನಸಾಮಾನ್ಯರಿಗೆ ಬಹಳ ಸುಲಭವಾಗಿ ತಲುಪುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಭಾಸ್ಕರ್ ವಿ ಸಾಂಕೇತಿಕವಾಗಿ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ಜನಸಾಮಾನ್ಯರಿಗೆ ಈ ಯೋಜನೆ ಅನುಕೂಲವಾಗುತ್ತದೆ. ಈ ಉದ್ದೇಶದಿಂದಲೇ ಸಾಮಾನ್ಯ ಸೇವಾ ಕೇಂದ್ರವನ್ನು ಪ್ರತಿಯೊಂದು ವಲಯದಲ್ಲಿ ತೆರೆಯಲಾಗಿದೆ ಎಂದರು.
ಹೆಬ್ರಿ ವಲಯದ ಚಾರ ಎ, ಚಾರ ಬಿ, ಬೆಳಂಜೆ, ಹೆಬ್ರಿ, ಬಚ್ಚಪ್ಪು ಹಾಗೂ ಶಿವಪುರ, ನಾಡ್ಪಲು ಗ್ರಾಹಕ ಸೇವಾ ಕೇಂದ್ರಗಳಲ್ಲಿ ತೆರೆಯಲಾಗಿದೆ. ಈ ಯೋಜನೆಯಲ್ಲಿ ಸರ್ಕಾರದ ಸೇವಾ ಶುಲ್ಕದ ದರದಲ್ಲಿಯೇ ಜನ ಸಾಮಾನ್ಯರಿಗೆ ನೀಡಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಾರಂಭಿಕ ಹಂತದಲ್ಲಿ ಸರ್ಕಾರದ ಸುಮಾರು ೪೫ ಸೇವೆಗಳನ್ನು ಗ್ರಾಮೀಣ ಭಾಗದ ರೈತರಿಗೆ ಒದಗಿಸಲಾಗುತ್ತದೆ. ಪ್ರತಿಯೊಬ್ಬರೂ ಕೂಡ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಹೆಗ್ಡೆ ವಹಿಸಿದ್ದರು. ಸಮಾರಂಭದಲ್ಲಿ ಮುದ್ರಾಡಿ ವಲಯದ ಮೇಲ್ವಿಚಾರಕ ಮನೋಜ್, ಹೆಬ್ರಿ ಸಿಟಿ ವಲಯದ ಮೇಲ್ವಿಚಾರಕ ಮಧು, ವಲಯದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಲಯದ ಸಾಮಾನ್ಯ ಸೇವಾಕೇಂದ್ರದ ಸಹಾಯಕರು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.