ಕುಂದಾಪುರ: ಕೆ. ಪ್ರತಾಪಚಂದ್ರ ಶೆಟ್ಟಿ ಶಾಸಕತ್ವ ಜ. 5ರಂದು ಕೊನೆಯಾಗಲಿದೆ. ಇವರು ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ 36 ವರ್ಷಗಳ ಸುದೀರ್ಘ ಶಾಸಕತ್ವ ಅವಧಿ ಹೊಂದಿದ್ದರು.
ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಪ್ರಸ್ತುತ ಚುನಾವಣಾ ರಾಜಕೀಯದಿಂದ ದೂರ ಉಳಿಯಲಿದ್ದು, ಅವರು ಎಐಸಿಸಿ ಸದಸ್ಯರಾಗಿದ್ದುಕೊಂಡು ಪಕ್ಷ ಹಾಗೂ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ.
ಇವರು ವಿಧಾನಸಭೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿ 1983, 1985, 1989, 1994ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ವಿಧಾನ ಪರಿಷತ್ಗೆ 2004, 2010, 2016ರಿಂದ ಆಯ್ಕೆಯಾಗಿದ್ದರು. ವಿಧಾನಪರಿಷತ್ ಸಭಾಪತಿಯಾಗಿ 2018ರಿಂದ ಕಾರ್ಯ ನಿರ್ವಹಿಸಿದ್ದರು. ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಮೊದಲ ಸ್ಪೀಕರ್ ಕೆ. ಪ್ರತಾಪಚಂದ್ರ ಶೆಟ್ಟಿ ಅವರು. ಹಾಗೂ ಇವರು ಅವಿಭಜಿತ ದ.ಕ. ಜಿಲ್ಲೆಯ ಎರಡನೇ ಸ್ಪೀಕರ್ ಎಂದು ಎನಿಸಿದ್ದರು.
ಕೆ. ಪ್ರತಾಪಚಂದ್ರ ಶೆಟ್ಟಿ 1950ರ ಸೆ. 4ರಂದು ಕೊಳ್ಕೆಬೈಲಿನಲ್ಲಿ ಜನಿಸಿದರು. ಇವರು ಮೂಲತಃ ಕುಂದಾಪುರ ತಾಲೂಕಿನ ಹೈಕಾಡಿ ನಿವಾಸಿ. ಬಿಎ ಪದವಿ ಪಡೆದ ಇವರು ಬಳಿಕ ವಿಜಯ ಬ್ಯಾಂಕ್ ನಲ್ಲಿ ಕೆಲ್ಸ ಮಾಡುತ್ತಿದ್ದರು. ತಂದೆಯ ನಿಧನರಾದ ನಂತರ ಬ್ಯಾಂಕ್ ಉದ್ಯೋಗ ಬಿಟ್ಟು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡರು. ತದನಂತರ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದರು. ಅಂದಿನ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದರು. ರಾಜ್ಯ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಪಕ್ಷದಲ್ಲಿ ಇವರು ಎಐಸಿಸಿ ಸದಸ್ಯರಾಗಿ ಹಲವು ಹುದ್ದೆಗಳನ್ನು ನಿಭಾಯಿಸಿದರು.