ಬೆಂಗಳೂರು: ಚಂಪಾ ಎಂದೇ ಪ್ರಸಿದ್ಧರಾದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ನಿಧನ ಹೊಂದಿದ್ದಾರೆ. ಅವರು ಇಂದು ಮುಂಜಾನೆ ಬೆಂಗಳೂರಿನ ಕೋಣನಕುಂಟೆ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು.
ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಮೂಲತಃ ಧಾರವಾಡದವರು. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ, ನಾಟಕ ರಚನೆ ಮಾಡುವುದಲ್ಲಿ ಪ್ರಸಿದ್ಧರಾಗಿದ್ದಾರೆ. ದೇಶ-ವಿದೇಶದಲ್ಲೂ ಇವರು ರಚಿಸಿದ ನಾಟಕಗಳು ಪ್ರದರ್ಶನ ಕಾಣುತ್ತವೆ. ಇವರು ವಿಮರ್ಶೆಯು ಬಹಳ ಹರಿತವಾಗಿರುತ್ತದೆ ಎಂದು ಖ್ಯಾತಿಯಾಗಿದೆ.
ಚಂಪಾ ಅವರು “ಸಂಕ್ರಮಣ” ಸಾಹಿತ್ಯ ಪತ್ರಿಕೆಯ ಸಂಪಾದಕರು ಹಾಗೂ ಪ್ರಕಾಶಕರೂ ಆಗಿದ್ದರು. ಈ ಪತ್ರಿಕೆಯ ಮೂಲಕ ಕನ್ನಡದ ಹಲವು ಸಾಹಿತಿಗಳ ಪ್ರತಿಭೆಯನ್ನು ಗುರುತಿಸಲಾಗಿದೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಂಪಾ ಅವರು ಕನ್ನಡಕ್ಕೆ ಅನ್ಯಾಯವಾದರೆ ಹೋರಾಟ ಮಾಡುವುದರಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಗೋಕಾಕ್ ಚಳವಳಿಯಲ್ಲಿಯೂ ಕೂಡ ಮುಂಚೂಣಿಯಲ್ಲಿ ಕೆಲಸ ಮಾಡಿದ್ದರು.