ಕಾರ್ಕಳ: 37ಸಮಿತಿ 1500ಸಾವಿರ ಸ್ವಯಂ ಸೇವಕರು ಕಾರ್ಕಳ ಉತ್ಸವದ ಯಶಸ್ಸಿಗೆ ಕಾರಣಕರ್ತರು. ಅವರ ಬಲ ಹಾಗೂ ಸ್ಪೂರ್ತಿ ಯಶಸ್ಸಿನ ಮೂಲವಾಗಿದೆ. ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೇ ಎಲ್ಲ ಸಮಿತಿಯವರು ಆಹೋರಾತ್ರಿ ದುಡಿದ ಎಲ್ಲರಿಗೂ ಕೃತಜ್ಞತೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ಕುಮಾರ್ ತಿಳಿಸಿದರು.
ಅವರು ಭಾನುವಾರ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಸಂಸದ ನಳೀನ್ ಕುಮಾರ್ ಮಾತನಾಡಿ, ಯಾವುದೇ ಖಾತೆ ಸಿಕ್ಕಿದರೂ ಅದನ್ನು ಸಮರ್ಪಕವಾಗಿ ನಿಬಾಯಿಸುವ ಹೊಣೆಗಾರಿಕೆ ಸಚಿವ ಸುನೀಲ್ಕುಮಾರ್ ಅವರಿಗೆ ಇದೆ ಎಂಬುವುದಕ್ಕೆ ಕಾರ್ಕಳ ಉತ್ಸವ ಉತ್ತಮ ನಿದರ್ಶನವಾಗಿದೆ ಎಂದರು.
ಈ ವೇಳೆ ಅಂತರರಾಷ್ಟ್ರೀಯ ಕ್ರೀಡಾಪಟು ಮಮತಾ ಪೂಜಾರಿ ಹೆರ್ಮುಂಡೆ ಹಾಗು ಶಿಕ್ಷಕಿ ವಂದನಾ ರೈ ಬಳಗದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವಾ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಟ್ ಉಪಸ್ಥಿತರಿದ್ದರು.