ಬೆಂಗಳೂರು:ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, 6 ರಿಂದ 8 ನೇ ತರಗತಿವರೆಗೆ ಬೋಧನೆ ಮಾಡಲು ಪದವೀಧರ ಶಿಕ್ಷಕ(ಜಿಪಿಟಿ) ಹುದ್ದೆಗಳ ಭರ್ತಿಗೆ ಕ್ರಮವನ್ನು ಕೈಗೊಂಡಿದೆ.
ಈ ನೇಮಕಾತಿಯಲ್ಲಿ ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ, ಶಿಕ್ಷಕರ ಅರ್ಹತಾ ಪರೀಕ್ಷೆ ಅಂಕ, ಪದವಿಯಲ್ಲಿ ಪಡೆದ ಅಂಕ ಮತ್ತು ಬಿ.ಇಡಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪದವಿಯಲ್ಲಿ ಶೇ.50 ರಷ್ಟು ಅಂಕ, ಟಿಇಟಿ ಪರೀಕ್ಷೆಯಲ್ಲಿ ಶೇ.20 ರಷ್ಟು ಅಂಕವನ್ನು ಪಡೆದಿರುವವರು ಈ ನೇಮಕಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ.
ಈ ಅಧಿಸೂಚನೆಗೆ ಆಕ್ಷೇಪಣೆಯನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ, ಡಾ. ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.