ದಾಂಡೇಲಿ: ಇಲ್ಲಿ ನಿರ್ಮಾಣವಾದ ಕರ್ನಾಟಕದ ಮೊದಲ ಹಾಗೂ ದೇಶದ ಎರಡನೇ ಮೊಸಳೆ ಪಾರ್ಕ್ ಅನ್ನು ಶಾಸಕ ಆರ್.ವಿ.ದೇಶಪಾಂಡೆ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.
ಇಲ್ಲಿಯ ದಾಂಡೇಲಪ್ಪ ದೇವಸ್ಥಾನದ ಹತ್ತಿರ ಕಾಳಿ ನದಿ ತಟದಲ್ಲಿ ನಿರ್ಮಾಣ ಮಾಡಲಾಗಿದೆ. ಈ ನದಿಯ ತಟದಲ್ಲಿ ಹೆಚ್ಚಾಗಿ ಮೊಸಳೆಗಳು ಕಾಣಿಸಿಕೊಳ್ಳುವುದರಿಂದ ಈ ಪ್ರದೇಶದಲ್ಲಿ ಮೊಸಳೆ ಪಾರ್ಕ್ ಅನ್ನು ಮೂರು ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಸದ್ಯ ಈ ಪಾರ್ಕ್ ಗೆ ಉಚಿತ ಪ್ರವೇಶವಿದೆ.
ಈ ಮೊಸಳೆ ಪಾರ್ಕ್ ಅನ್ನು ಎರಡು ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಪಾರ್ಕ್ ನಲ್ಲಿ ಕೆಲವು ಕಾಡು ಪ್ರಾಣಿಗಳ ಪ್ರತಿರೂಪಗಳನ್ನು, ಮಕ್ಕಳಿಗೆ ಆಟವಾಡಲು ಅಗತ್ಯವಿರುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರವಾಸಿಗರು ಮೊಸಳೆಗಳನ್ನು ನೋಡಲು ಟವರ್ ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ವೀಕ್ಷಣೆಯ ಸಮಯವನ್ನು ಇನ್ನೂ ನಿರ್ಧಾರವಾಗಿಲ್ಲ.