ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಸ್ರಣ್ಣ ಕುಟುಂಬದವರು ಹಾಗೂ ಅರ್ಚಕರ ನಡುವಿನ ವ್ಯಾಜ್ಯದ ಹಿನ್ನೆಲೆ ಬುಧವಾರ ಮಧ್ಯಾಹ್ನದ ದೇವಿಯ ಪೂಜೆಯೇ ವಿಳಂಬಗೊಂಡಿರುವ ಘಟನೆ ನಡೆದಿದೆ. ಕೊನೆಗೆ ಮುಜರಾಯಿ ಇಲಾಖೆಯ ಅಧಿಕಾರಿಗಳ ತಾಕೀತಿನ ಮೇರೆಗೆ ಆಸ್ರಣ್ಣರು ಪೂಜೆ ನೆರವೇರಿಸಿದ್ದಾರೆ.
ಕಟೀಲು ದೇವಸ್ಥಾನದಲ್ಲಿ ಕೀಳು ಶಾಂತಿ ಎಂಬ ಅರ್ಚಕರ ಹುದ್ದೆಯ ವಿಚಾರದಲ್ಲಿ ಕಳೆದ ಎರಡು ದಶಕಗಳಿಂದಲೂ ಮುಜರಾಯಿ ಆಯುಕ್ತರ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಸುದೀರ್ಘ ಕಾಲದ ನ್ಯಾಯಾಲಯ ವ್ಯಾಜ್ಯದ ಬಳಿಕ ಇದೀಗ ತೀರ್ಪು ಹೊರಬಿದ್ದಿದ್ದು, ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಕಳೆದ ಮಾರ್ಚ್ 25ರಂದು ಈ ಬಗ್ಗೆ ಆದೇಶ ಹೊರಡಿಸಿದ್ದರು.
ಈ ಮೂಲಕ ಗುರುರಾಜ ಭಟ್ ಅವರೇ ಆನುವಂಶಿಕ ಕೀಳು ಶಾಂತಿ ಅರ್ಚಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶ ಬಂದಿತ್ತು. ಇದೀಗ ಕಟೀಲು ದೇವಸ್ಥಾನದ ಆಸ್ರಣ್ಣರಿಬ್ಬರ ವಿರುದ್ಧ ತೀರ್ಪು ಬಂದಿದ್ದು ಅವರ ಪ್ರತಿಷ್ಠೆಗೆ ಕುಂದು ಉಂಟಾಗಿತ್ತು. ಈ ಹಿನ್ನೆಲೆ ಮುಜರಾಯಿ ಇಲಾಖೆಯ ಆದೇಶವನ್ನು ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಆಸ್ರಣ್ಣ ಕುಟುಂಬಸ್ಥರು ಪಾಲಿಸಲು ತಯಾರಿರಲಿಲ್ಲ.
ಈ ಹಿನ್ನೆಲೆ ಬುಧವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಗುರುರಾಜ ಭಟ್ ಅವರಿಗೆ ಆಸ್ರಣ್ಣ ಕುಟುಂಬಸ್ಥರ ಅಣತಿಯಂತೆ ಸೆಕ್ಯುರಿಟಿಯವರು ತಡೆ ಒಡ್ಡಿದ್ದರೆನ್ನಲಾಗಿದೆ.
ಮಧ್ಯಾಹ್ನದ ಪೂಜೆಯನ್ನು ವಿಳಂಬಿಸಿದ್ದರಿಂದ ಮುಜರಾಯಿ ಇಲಾಖೆಯಿಂದ ಕರೆ ಬಂದ ಬಳಿಕ 12 ಗಂಟೆಗೆ ನಡೆಯಬೇಕಿದ್ದ ಮಧ್ಯಾಹ್ನದ ಪೂಜೆಯನ್ನು 2 ಗಂಟೆ ಸುಮಾರಿಗೆ ಲಕ್ಷ್ಮೀನಾರಾಯಣ ಆಸ್ರಣ್ಣ ನೆರವೇರಿಸಿದ್ದಾರೆ. ದೇವಿಯ ಪೂಜೆ ತಡವಾದ ಹಿನ್ನೆಲೆ ಮಕ್ಕಳ ಅನ್ನಪ್ರಾಶಾನ, ಭಕ್ತರಿಗೆ ನೀಡುವ ಅನ್ನಪ್ರಸಾದ ವಿತರಣೆಯಲ್ಲಿಯೂ ವಿಳಂಬವಾಗಿದೆ.