ಕೊಟ್ಟಾಯಂ: ಕೇರಳದ ಹೆಸರಾಂತ ಹಾವು ಹಿಡಿಯುವವರಲ್ಲಿ ಒಬ್ಬರಾದ ವಾವಾ ಸುರೇಶ್ ಅವರಿಗೆ ಸೋಮವಾರ ವಿಷಪೂರಿತ ನಾಗರಹಾವು ಕಚ್ಚಿದೆ. ಇದರ ಪರಿಣಾಮ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಸದ್ಯ ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಟ್ಟಾಯಂನ ಕುರಿಚಿ ಗ್ರಾಮದ ಮನೆಗೆ ಹಾವು ಹಿಡಿಯಲು ಹೋದಾಗ ಈ ಘಟನೆ ಸಂಭವಿಸಿದೆ. ಹಾವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕುವ ಸಂದರ್ಭ ಹಾವು ಆತನ ಬಲತೊಡೆಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕವೂ ತಪ್ಪಿಸಿಕೊಂಡ ನಾಗರಹಾವನ್ನು ಹಿಡಿದುಕೊಂಡು ಅದನ್ನು ಪ್ಯಾಕ್ ಮಾಡಿ, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದರು ಎಂದು ಹೇಳಲಾಗಿದೆ.