ಕುಂದಾಪುರ: ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ತಾ.ಪಂ., ಎಲ್ಲ ಗ್ರಾ.ಪಂ.ಗಳು, ಜಿಲ್ಲಾ ಭಾರತ್ ಸೇವಾದಳ ಸಮಿತಿ ಉಡುಪಿ, ತಾಲೂಕು ಸೇವಾದಳ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಧ್ವಜ ಮಾಹಿತಿ ಶಿಬಿರವು ಬುಧವಾರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿ ಶ್ವೇತಾ.ಎನ್, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ. ಧ್ವಜಾರೋಹಣ, ಅವರೋಹಣ ಮಾಡುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ರಾಷ್ಟ್ರ ಧ್ವಜ ನಮ್ಮೆಲ್ಲರ ಅಭಿಮಾನದ ಸಂಕೇತ ಎಂದು ಹೇಳಿದರು.
ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿ ಉಪಾಧ್ಯಕ್ಷ ಕೆ.ಸಿ.ರಾಜೇಶ್ ಮಾತನಾಡಿ, ಸೇವಾದಳದ ವತಿಯಿಂದ ರಾಷ್ಟ್ರಧ್ವಜದ ಬಗೆಗಿನ ಮಾಹಿತಿಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಸೇವಾದಳವು ರಾಷ್ಟ್ರೀಯತೆ, ಭಾವೈಕ್ಯತೆ, ಸೌಹಾರ್ದತೆಯನ್ನು ಜಾಗೃತಗೊಳಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭ ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಕುಂದಾಪುರ ತಾ. ಸೇವಾದಳದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಪುಂಡಾಲೀಕ ಮರಾಠೆ, ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ತಾ. ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ ಶೆಟ್ಟಿ ಸ್ವಾಗತಿಸಿ, ಸೇವಾದಳ ಜಿಲ್ಲಾ ಸಮಿತಿ ಸಂಘಟಕ ಪಕ್ಕೀರ ಗೌಡ ಕಾರ್ಯಕ್ರಮ ನಿರೂಪಿಸಿದರು.