ಮಂಗಳೂರು: ವೇಷ್ಯಾವಾಟಿಕೆ ದಂಧೆಗೆ ಯುವತಿಯರನ್ನು/ಮಹಿಳೆಯರನ್ನು ಒದಗಿಸುತ್ತಿದ್ದ ಮೂವರು ದಲ್ಲಾಳಿಗಳನ್ನು ವಶಕ್ಕೆ ಪಡೆದುಕೊಂಡು ನಾಲ್ವರು ಯುವತಿಯರನ್ನು ಮಂಗಳೂರು ಸಿಸಿಬಿ ಪೊಲೀಸರು ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.
ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ನ ಅಪಾರ್ಟ್ ಮೆಂಟ್ ಒಂದರ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆಗೆ ಮಹಿಳೆಯರನ್ನು ಒದಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತ್ರತ್ವದ ತಂಡ ದಾಳಿ ನಡೆಸಿದೆ. ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಹುಡುಗಿಯರನ್ನು ತರಿಸಿಕೊಂಡು ಅನೈತಿಕ ಚಟುವಟಿಕೆ ದಂಧೆಯನ್ನು ನಡೆಸುತ್ತಿದ್ದ ಮೂವರು ದಲ್ಲಾಳಿಗಳಾದ ಕೆ.ಪಿ ಹಮೀದ್(54), ಅನುಪಮ ಶೆಟ್ಟಿ(46), ನಿಶ್ಮಿತ(23) ಬಂಧಿಸಿದ್ದಾರೆ.
ಬಂಧಿತರಿಂದ 5 ಮೊಬೈಲ್ ಫೋನ್, 50 ಸಾವಿರ ನಗದು, ಮಾರುತಿ 800 ಕಾರು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.