ಮಂಗಳೂರು: ಉಕ್ರೇನ್ನಲ್ಲಿ ಸಿಲುಕಿದ ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ಕ್ಲೇಟನ್ ಅವರ ಪೋಷಕರು ಮಗನನ್ನು ಮರಳಿ ಊರಿಗೆ ಕರೆತರಲು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕ್ಲೇಟನ್ ತಾಯಿ ಕ್ಲೇಟನ್ ಪ್ರತೀ 15 ನಿಮಿಷಕ್ಕೊಮ್ಮೆ ನಾನು ಅವನ ಜೊತೆ ಮಾತಾಡುತ್ತೇನೆ. ಅಲ್ಲಿ ದೈನಂದಿನ ಚಟುವಟಿಕೆಗಳೆಲ್ಲಾ ಹಾಗೇ ನಡೆಯುತ್ತಿದೆ. ಅವರ ಹತ್ತಿರವಿರುವ ಒಂದು ಏರ್ ಪೋರ್ಟ್ ನಲ್ಲಿ ದೊಡ್ಡ ಮಿಸೈಲ್ ದಾಳಿಯಾಗಿದೆ. ಭಾರತೀಯ ರಾಯಭಾರಿ ಕಚೇರಿ ಅವರ ಸಂಪರ್ಕದಲ್ಲಿದ್ದು, ಆದಷ್ಟು ಶೀಘ್ರ ಬೇರೆ ಕಡೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ. ಸದ್ಯ ಉಕ್ರೇನ್ ಕ್ಯಾಪಿಟಲ್ ನಗರದಲ್ಲೇ ಇದ್ದಾನೆ. ಬೆಳಗ್ಗೆ ಅವನು ಅಷ್ಟು ಪ್ಯಾನಿಕ್ ಆಗಿರಲಿಲ್ಲ, ಆದರೆ ಈಗ ಸ್ವಲ್ಪ ಭಯದಲ್ಲಿ ಇದ್ದಾನೆ. ಸದ್ಯ ಅಷ್ಟು ಆತಂಕ ಇಲ್ಲವಾದ್ರೂ ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಸರ್ಕಾರ ದಯವಿಟ್ಟು ಆದಷ್ಟು ಬೇಗ ನಮ್ಮ ಮಗನನ್ನ ಕರೆ ತರಲಿ. ಡಿಸಿಗೆ ಸಂಪರ್ಕ ಮಾಡಿದ್ದೇವೆ, ದಯವಿಟ್ಟು ಇಲ್ಲಿಗೆ ಕರೆದು ಕೊಂಡು ಬನ್ನಿ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳ್ಳಿಗ್ಗೆಯಿಂದ ಮಗನ ಸಂಪರ್ಕದಲ್ಲಿದ್ದೇವೆ. ನಮಗೂ ಅವರಿಗೂ 5 ಗಂಟೆಗಳ ವ್ಯತ್ಯಾಸವಿದೆ. ದ.ಕ. ದ ಇಬ್ಬರು ವಿದ್ಯಾರ್ಥಿಗಳಿದ್ದು, ಮತ್ತೊಂದು ವಿದ್ಯಾರ್ಥಿನಿ ನನ್ನ ಸ್ನೇಹಿತನ ಮಗಳು. ನಾವು ನಿಯಮಿತ ಸಂಪರ್ಕದಲ್ಲಿದ್ದು ಅಷ್ಟು ಭಯಪಡುವ ಸ್ಥಿತಿ ಉಂಟಾಗಿರಲಿಲ್ಲ ಆದರೆ ಮಧ್ಯಾಹ್ನದ ವೇಳೆ ಹತ್ತಿರದ ವಿಮಾನನಿಲ್ದಾಣದಲ್ಲಿ ಮಿಸೈಲ್ ದಾಳಿಯಾದ ನಂತರ ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ಅಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಭಾರತಕ್ಕೆ ಹುಷಾರಾಗಿ ಕರೆತರುವಂತೆ ಭಾರತ ಸರ್ಕಾರದಲ್ಲಿ ಕ್ಲೇಟನ್ ತಂದೆ ಮನವಿ ಮಾಡಿಕೊಂಡರು.