ಮಣಿಪಾಲ: ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಹಾಗೂ ವಿಧಾನಸಭೆಯ ಅಧಿವೇಶನಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ವತಿಯಿಂದ ಉಡುಪಿಯ ಮಣಿಪಾಲದ ಟೈಗರ್ ಸರ್ಕಲ್ ಬಳಿ ಶನಿವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಈಶ್ವರಪ್ಪನವರು ಮುಂದೊಂದು ದಿನ ಕೇಸರಿ ಧ್ವಜ ನಮ್ಮ ರಾಷ್ಟ್ರಧ್ವಜ ಆಗಬಹುದೆಂದು ಹೇಳಿದ್ದರು. ಆದರೆ ಇವತ್ತೇ, ನಾಳೆಯೇ ಆಗುತ್ತದೆ ಎಂದು ಅವರೇನು ಹೇಳಿಲ್ಲ. ಈ ಮಾತನ್ನು ನಾನು ಕೂಡ ಸಮರ್ಥನೆ ಮಾಡಿಕೊಳ್ಳುತ್ತಿದ್ದು ಮುಂದೊಂದು ದಿನ ಆದರೂ ಆಗಬಹುದು. ಈ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ವಿಧಾನಸಭಾ ಅಧಿವೇಶನಕ್ಕೆ ವಿನಾಕಾರಣ ಅಡ್ಡಿ ಉಂಟು ಮಾಡುತ್ತಿದೆ. ಹಿಜಾಬ್ ವಿಚಾರವನ್ನು ಮರೆಮಾಚಲು ಕಾಂಗ್ರೆಸ್ ಈ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದರು.