ಉಡುಪಿ: ಬಡಗುತಿಟ್ಟು ಯಕ್ಷಗಾನದ ಸ್ತ್ರೀ ವೇಷದಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರಿಗಾರ್(96) ಭಾನುವಾರ ರಾತ್ರಿ ನಿಧನರಾದರು.
ಮಂದಾರ್ತಿ ಮೇಳದ ಮೂಲಕ ರಂಗಪ್ರವೇಶ ಮಾಡಿದ ಇವರು 5 ದಶಕಗಳ ಕಾಲ ನಿರಂತರವಾಗಿ ಸ್ತ್ರೀ ವೇಷಧಾರಿಯಾಗಿ ಮಿಂಚಿದ್ದರು. 53 ವರ್ಷಗಳ ವೃತ್ತಿ ಬದುಕಿನಲ್ಲಿ ಮಂದಾರ್ತಿ, ಮಾರಣಕಟ್ಟೆ, ಸೌಕೂರು, ಅಮೃತೇಶ್ವರಿ, ಇಡಗುಂಜಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರಿಗೆ 2004ರಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2015 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.
1926 ರಲ್ಲಿ ಜನಿಸಿ, 4 ನೇ ತರಗತಿವರೆ ಓದು ಪೂರೈಸಿ, ಬಳಿಕ ಯಕ್ಷಗಾನ ರಂಗದಲ್ಲಿ ಸುಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಮಿಂಚಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ರವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.