ಅಲ್ಲು ಅರ್ಜುನ್ ನಟನೆಯ ರಕ್ತಚಂದನ ಮಾಫಿಯಾ ಕಥಾಹಂದರವನ್ನೊಳಗೊಂಡ ಪುಷ್ಪ ಚಿತ್ರ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಕನ್ನಡದಲ್ಲೂ ಇದೇ ರೀತಿಯ ಮಾಫಿಯಾ ಕಥಾಹಂದರವನ್ನೊಳಗೊಂಡ ‘ಮೇಲೊಬ್ಬ ಮಾಯಾವಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದು ಸಂಚಾರಿ ವಿಜಯ್ ನಟನೆಯ ಕೊನೆಯಚಿತ್ರವಾಗಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುವ ಹರಳು ಕಲ್ಲು ದಂಧೆ, ಹರಳಿಗಾಗಿ ಕಾರ್ಮಿಕರು ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹುಡುಕಾಟ ನಡೆಸುವ ಪರಿ, ಮಾಫಿಯಾದಿಂದ ಪ್ರಕೃತಿಯ ಮೇಲೆ ಆಗುತ್ತಿರುವ ಪರಿಣಾಮ ಹೀಗೆ ಮುಂತಾದ ಅಂಶಗಳನ್ನು ‘ಮೇಲೊಬ್ಬ ಮಾಯಾವಿ’ ಚಿತ್ರ ಹೊಂದಿದೆ.
‘ಮೇಲೊಬ್ಬ ಮಾಯಾವಿ’ ಚಿತ್ರವು ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ. ಭರತ್ ಕುಮಾರ್ ಹಾಗೂ ತನ್ವಿ ಅಮಿನ್ ಕೊಲ್ಯ ಅವರು ಚಿತ್ರದ ನಿರ್ಮಾಪಕ ಹಾಗೂ ಬಿ.ನವೀನ್ ಕೃಷ್ಣ ನಿರ್ದೇಶಕರು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ದಿವಂಗತ ಎಲ್.ಎನ್.ಶಾಸ್ತ್ರಿ ಅವರ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನಲೆ ಸಂಗೀತ, ಕೆ.ಗಿರೀಶ್ ಕುಮಾರ್ ಅವರ ಸಂಕಲನ, ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಹಣ ಹಾಗೂ ರಾಮು ಅವರ ನೃತ್ಯ ಸಂಯೋಜನೆಯಿದೆ.