ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ದನ ಕಳವು ಆಗುತ್ತಿದ್ದು, ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗದಂತೆ ಕ್ರಮ ತೆಗೆದುಕೊಳ್ಳಲು ಗೋ ರಕ್ಷಣಾ ಸಮಿತಿಯನ್ನು ರಚನೆ ಮಾಡಬೇಕೆಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ ಪಿ ಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಕಾರಾವಳಿಯಲ್ಲಿ ಹೆಚ್ಚುತ್ತಿರುವ ದನ ಕಳವಿನ ಕುರಿತು ಮಾದ್ಯಮಗಳಲ್ಲಿ ವರದಿಗಳನ್ನು ನೋಡಿದ್ದೇನೆ. ಈ ಕುರಿತು ಕ್ರಮ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ಗಳು ಗೋ ರಕ್ಷಣಾ ಸಮಿತಿಯನ್ನು ರಚಿಸಿ, ಅಕ್ರಮವಾಗಿ ಗೋ ಗಳನ್ನು ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸಬೇಕು. ನಾಕಾಬಂದಿ ಹಾಗೂ ಚೆಕ್ ಪೋಸ್ಟ್ ಗಳನ್ನು ಬಲಪಡಿಸಿ, ಪ್ರತಿ ವಾಹನಗಳ ತಪಾಸಣೆಯನ್ನು ತಪ್ಪದೇ ಮಾಡಬೇಕು. ಇ-ಛಾಪಾ ಕಾಗದದಲ್ಲಿ ದನ ಮಾರುವವರು ಹಾಗೂ ಕೊಳ್ಳುವವರು ಮುಚ್ಚಳಿಕೆ ಪಡೆದಿರಬೇಕು. ದನ ಸಾಕಾಣಿಕೆ ಮಾಡುವವರಲ್ಲಿ ಉಂಟಾದ ಭಯವನ್ನು ತೊಡೆದು ಹಾಕಿ ಸರ್ಕಾರ ದನ ಸಾಕಾಣಿಕೆ ಮಾಡುವವರೊಂದಿಗೆ ಇರುತ್ತೇವೆ ಎಂಬ ಭರವಸೆ ನೀಡಬೇಕು ಎಂದು ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.