ಮಂಗಳೂರು: ಊರಿಗೆ ಮನುಷ್ಯನಲ್ಲ ಸ್ಮಶಾನಕ್ಕೆ ಹೆಣ ಅಲ್ಲ ಎಂಬ ಪರಿಸ್ಥಿತಿ ಕಾಂಗ್ರೆಸ್ ನದ್ದಾಗಿದೆ. ಹಿಜಾಬ್ ಪರವಾಗಿ ನಾವಿದ್ದೇವೆನ್ನಲು ಡಿ.ಕೆ.ಶಿವಕುಮಾರ್ ಬಿಡುತ್ತಿಲ್ಲ. ನಾವು ಹಿಂದೂ ಪರವಾಗಿದ್ದೇವೆನ್ನಲು ಸಿದ್ದರಾಮಯ್ಯ ಬಿಡ್ತಿಲ್ಲ. ಇದು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಫೈಟ್ ಅಷ್ಟೇ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ವಿಧಾನಸಭೆಯಲ್ಲಿ ಹಿಜಾಬ್ ಕೇಸರಿ ಶಾಲು ವಿವಾದದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಜನಗಳ ಸಮಸ್ಯೆ ಬಗ್ಗೆ ಚರ್ಚೆ ಮಾಡೋದಕ್ಕೆ ವಿಧಾನಸಭೆ ನಡೆಯುತ್ತೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಇವತ್ತು ಸಮಸ್ಯೆಯಾಗಿದ್ದು, ಕಾಂಗ್ರೆಸ್ಗೆ ಆ ಕಾಳಜಿ ಬೇಕಲ್ವಾ. ಎಲ್ಲಿದೆ ಆ ಕಾಳಜಿ, ಈ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ. ಚರ್ಚೆ ಮಾಡಿದ್ರೆ ಓಟು ಹೋಗುತ್ತೆ. ಓಟು ಹೋಗುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ತೀರ್ಮಾನಿಸಿದೆ. ಅದಕ್ಕೆ ಈಶ್ವರಪ್ಪರನ್ನು ಹಿಡಿದುಕೊಂಡಿದ್ದಾರೆ ಅಷ್ಟೇ. ಇದು ಬಿಟ್ಟು ಕಾಂಗ್ರೆಸ್ ಗೆ ಬೇರೆನೂ ಉದ್ದೇಶವಿಲ್ಲ. ನಾವು ಈ ಹಿಂದೆ ರೈತರ, ಬಡವರ ಪರವಾಗಿ ಹೋರಾಟ ಮಾಡಿದ್ವಿ. ಆದರೀಗ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಡವರ ಪ್ರಶ್ನೆ ಏನು ಬರುತ್ತೆ. ಈಶ್ವರಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮೂವರನ್ನು ಬಿಟ್ರೆ ಬೇರೆನಿದೆ ಎಂದರು.
ಒಂದು ಸದನಕ್ಕೆ ಪ್ರತಿ ದಿನ ಒಂದು ಕೋಟಿ ಖರ್ಚಾಗುತ್ತೆ. ಜನಗಳ ದುಡ್ಡು ತಗೊಂಡು ವಿಧಾನಸೌಧದಲ್ಲಿ ಆರಾಮವಾಗಿ ನಿದ್ದೆ ಹೊಡೆದ್ರೆ ಏನು ಅರ್ಥ ಬರುತ್ತೆ. ಜನರಿಗೆ ಮೋಸ ಮಾಡಿದ ಹಾಗೆ ಅಲ್ವಾ? ಕಾಂಗ್ರೆಸ್ ಅವರಿಗೆ ಬುದ್ದಿ, ಮಾನ ಮರ್ಯಾದೆ ಏನಾದರೂ ಇದ್ರೆ ಜನಗಳ ವಿಷಯ ಎತ್ತಲಿ. ಅದು ಬಿಟ್ಟು ಈಶ್ವರಪ್ಪ, ಡಿ.ಕೆ ಶಿವಕುಮಾರ್, ತೋಳು ಏರಿಸೋದು ಹೊಡೆದಾಡೋದಕ್ಕೆ ವಿಧಾನಸಭೆಗೆ ಬರೋದಾ? ಕಾಂಗ್ರೆಸ್ ಅವರು ಹಿಜಾಬ್, ಕೇಸರಿ ಬಗ್ಗೆ ನಿಲುವೇನು ಎಂದು ಹೇಳಬೇಕು. ಲಕ್ಷಾಂತರ ಜನ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಹೋಗಬೇಕು. ಶಾಲೆಗೆ ಹೋಗೊದು ವಿದ್ಯಾಭ್ಯಾಸಕ್ಕೆ ಹೊರತು ಮತ ಪ್ರಚಾರಕ್ಕೆ ಅಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆ ವ್ಯವಸ್ಥೆಯನ್ನು ಕೊಡುವ ತೀರ್ಮಾನದ ವೇದಿಕೆ ವಿಧಾನಸಭೆ ಆಗಬೇಕು. ವಿಧಾನಸಭೆಗೆ ಅಗೌರವ ಕೊಡುವ ಕಾಂಗ್ರೆಸ್ನ್ನು ಮುಂದಿನ ದಿನ ಜನರು ರಾಜ್ಯದಿಂದ ಓಡಿಸ್ತಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ.