ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತ, ಸರ್ವಧರ್ಮ ಸಮನ್ವಯದ ಪ್ರವಚನಕಾರ ಮಹಾಲಿಂಗಪುರದ ಇಬ್ರಾಹಿಂ ಸುತಾರ(76) ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ನೋವಿನಿಂದ ಬಳಲುತ್ತಿದ್ದ ಇಬ್ರಾಹಿಂ ಸುತಾರ ಅವರಿಗೆ ಇಂದು ಮುಂಜಾನೆ ಲಘು ಹೃದಯಾಘಾತ ಸಂಭವಿಸಿತ್ತು. ಕುಟುಂಬಸ್ಥರು ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಇಬ್ರಾಹಿಂ ಸುತಾರ ಅವರಿಗೆ 2018 ಏಪ್ರಿಲ್ 2ರಂದು ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು. ಸೂಫಿ ಸಂತ, ತತ್ವಪದ ಗಾಯಕ, ಕನ್ನಡ ನಾಡಿನ ಕಬೀರ ಎಂದೆನಿಸಿಕೊಂಡ ಇವರು, ತಮ್ಮ ಪ್ರವಚನ ಮತ್ತು ಸಂವಾದಗಳ ಮೂಲಕ ಹಿಂದೂ ಮುಸ್ಲೀಮರ ಮಧ್ಯೆ ಭಾವೈಕ್ಯತೆಯನ್ನು ಸಾರುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.