ಉಡುಪಿ: ಉಡುಪಿಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರ ಚತುರ್ಥ ಪರ್ಯಾಯ ಸಂಭ್ರಮದ ಮೆರವಣಿಗೆ ಜನವರಿ ೧೮ರಂದು ಕೊರೊನಾ ಬಿಕ್ಕಟ್ಟಿನ ನಡುವೆ ಸರಳವಾಗಿ ಸಂಪ್ರದಾಯಬದ್ಧವಾಗಿ ಸಂಪನ್ನಗೊಂಡಿದೆ.
ಉಡುಪಿಯ ಪರ್ಯಾಯ ಮಹೋತ್ಸವ ೨೦೨೨ರಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಮಂಗಳವಾರದಂದು ಬೆಳಗಿನ ಜಾವ ೫.೫೫ಕ್ಕೆ ಸರಿಯಾಗಿ ನಾಲ್ಕನೇ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ಬಹಳ ಅದ್ದೂರಿಯಾಗಿ ವಿಜೃಭಂಣೆಯಿಂದ ನಡೆಯುತ್ತಿತ್ತು. ಈ ಬಾರಿ ಕೊರೊನಾ ಕಾರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದ್ದರಿಂದ ಪರ್ಯಾಯ ಮೆರವಣಿಗೆ ಅತ್ಯಂತ ಸರಳವಾಗಿ ನೆರವೇರಿತು.
ಪರ್ಯಾಯ ಮುಗಿದ ನಂತರದಲ್ಲಿ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿಯವರಿಂದ ಮಧ್ವಾಚಾರ್ಯರು ನೀಡಿರುವ ಅಕ್ಷಯ ಪಾತ್ರೆಯನ್ನು ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಹಸ್ತಾಂತರ ಮಾಡಿದರು. ತದನಂತರ ಸರ್ವಜ್ಞ ಪೀಠಾರೋಹಣಗೈಯುವ ಮೂಲಕ ವಿದ್ಯಾಸಾಗರ ತೀರ್ಥ ಶ್ರೀಪಾದರು ಮುಂದಿನ ಎರಡು ವರ್ಷಗಳ ಕಾಲ ಕೃಷ್ಣನ ಪೂಜೆಯ ಅಧಿಕಾರವನ್ನು ಹೊತ್ತುಕೊಂಡರು.
ಸಂಪ್ರದಾಯಕ್ಕೆ ಸೀಮಿತವಾಗಿ ವಿಜೃಭಂಣೆಯಿಂದ ನಡೆದ ಉಡುಪಿ ಶ್ರೀ ಕೃಷ್ಣಾಪುರ ಮಠ ಪರ್ಯಾಯ ಮಹೋತ್ಸವದ ಮೆರವಣಿಗೆಯಲ್ಲಿ ಇದ್ದ ಚಂಡೆ, ವಾದ್ಯದ ಘೋಷಗಳು ಹಾಗೂ ಟ್ಯಾಬ್ಲೋಗಳು ನೆರೆದಿದ್ದ ಭಕ್ತಾಧಿಗಳ ಕಣ್ಮನ ಸೆಳೆಯುತ್ತಿತ್ತು.