ಸುಳ್ಯ: ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಹುಭಾಷಾ ನಟ ಪವನ್ ಕಲ್ಯಾಣ್ ಮಂಗಳವಾರ ಭೇಟಿ ನೀಡಿ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ಆದಿ ಸುಬ್ರಹ್ಮಣ್ಯದ ಹುತ್ತಕ್ಕೆ ವಸ್ತ್ರವನ್ನು ಸಮರ್ಪಿಸಿದರು.
ಈ ವೇಳೆ ಮಾತನಾಡಿದ ನಟ ಪವನ್ ಕಲ್ಯಾಣ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಪವಿತ್ರವಾದ ಕ್ಷೇತ್ರ. ಪ್ರತಿ ಏಕಾದಶಿ ದಿನದಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತಾ ಕಾರ್ಯ ಶ್ಲಾಘನೀಯ. ಇಲ್ಲಿ ಪರಿಸರ ರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ಎಲ್ಲಾ ದೇವಸ್ಥಾನಗಳೂ ಕುಕ್ಕೆ ಸುಬ್ರಹ್ಮಣ್ಯವನ್ನು ಅನುಸರಿಸಬೇಕು. ಇದರಿಂದ ಪರಿಸರ ಸ್ವಚ್ಛತಾ ಜಾಗೃತಿ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.