ಕುಂದಾಪುರ: ಗಣರಾಜ್ಯೋತ್ಸವ ದಿನದಂದು ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳುವ ಮೂಲಕ ರಾಯಚೂರು ನ್ಯಾಯಾಧೀಶರು ಮಹಾನಾಯಕರಿಗೆ ಅಪಮಾನ ಮಾಡಿದ್ದಾರೆ. ನ್ಯಾಯಾಧೀಶರ ಈ ವರ್ತನೆ ಕೇವಲ ದಲಿತ ಸಮಾಜಕ್ಕಲ್ಲ ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ದಲಿತ ಸಂಘರ್ಷದ ರಾಜ್ಯ ಸಮಿತಿ ಸದಸ್ಯ, ಹೋರಾಟಗಾರ ಜಯನ್ ಮಲ್ಪೆ ಹೇಳಿದರು.
ಗಣರಾಜ್ಯೋತ್ಸವ ಆಚರಣೆ ವೇಳೆ ರಾಯಚೂರು ನ್ಯಾಯಾಧೀಶರು ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಭಾವಚಿತ್ರ ತೆಗೆಸಿದ್ದರು, ಈ ಹಿನ್ನೆಲೆ ನ್ಯಾಯಾಧೀಶರ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಸಂಜೆ ಕುಂದಾಪುರ ಶಾಸ್ತ್ರೀ ಸರ್ಕಲ್ನಲ್ಲಿ ನಡೆದ ಪ್ರತಿಭಟನೆೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದುರ್ವರ್ತನೆ ತೋರಿದ ನ್ಯಾಯಾಧೀಶರನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಬೇಕು. ಮತದಾನದ ಹಕ್ಕು ಕಸಿಯಬೇಕು. ಆಸ್ತಿಪಾಸ್ತಿ ಮುಟ್ಟುಗೋಲು ಹಾಕಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ರಾಷ್ಟ್ರ ನಾಯಕರಿಗೆ ಅಪಮಾನವಾದಾಗಲೂ ರಾಜ್ಯದ ಕಾನೂನು ಸಚಿವರು, ಮುಖ್ಯಮಂತ್ರಿಯವರು ಮೌನವಾಗಿರುವುದು ಬೇಸರವನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ನ್ಯಾಯವಾದಿ ಇಲಿಯಾಸ್ ನಾವುಂದ, ಸುರೇಶ್ ಬಾರ್ಕೂರು, ಪ್ರಭಾಕರ್ ವಿ., ಸುರೇಶ್ ಹಕ್ಲಾಡಿ, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ನಾಗರಾಜ್ ಉಪ್ಪುಂದ, ಪೌರಕಾರ್ಮಿಕ ಸಂಘ ಜಿಲ್ಲಾಧ್ಯಕ್ಷ ನಾಗರಾಜ್ ಕುಂದಾಪುರ ಮತ್ತಿತರರು ಭಾಗವಹಿಸಿದ್ದರು.